ADVERTISEMENT

ಒಕ್ಕಲಿಗ ಧರ್ಮ ಸಮಾವೇಶ ಇಂದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:23 IST
Last Updated 27 ಜನವರಿ 2021, 2:23 IST
ಕುಣಿಗಲ್‌ನಲ್ಲಿ ನಡೆಯಲಿರುವ ಧರ್ಮಸಮಾವೇಶ ಸಿದ್ಧತೆಗಳನ್ನು ಸಿದ್ದರಾಮ ಚೈತನ್ಯ ಸ್ವಾಮಿ ಪರಿಶೀಲಿಸಿದರು
ಕುಣಿಗಲ್‌ನಲ್ಲಿ ನಡೆಯಲಿರುವ ಧರ್ಮಸಮಾವೇಶ ಸಿದ್ಧತೆಗಳನ್ನು ಸಿದ್ದರಾಮ ಚೈತನ್ಯ ಸ್ವಾಮಿ ಪರಿಶೀಲಿಸಿದರು   

ಕುಣಿಗಲ್: ಒಕ್ಕಲಿಗರ ಧರ್ಮ ಮಹಾಸಭಾ ಆಶ್ರಯದಲ್ಲಿ ಅರೆ ಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಜನವರಿ 27ರಂದು ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಒಕ್ಕಲಿಗ ಧರ್ಮ ಸಮಾವೇಶ ನಡೆಯಲಿದೆ.

ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು ತಾಲ್ಲುಕಿನ ಬಹುಸಂಖ್ಯಾತ ಒಕ್ಕಲಿಗರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದಿಚುಂಚನಗಿರಿ ಕ್ಷೇತ್ರದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯನ್ನು ಪ್ರವಾಸಿ ಮಂದಿರದಿಂದ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ತರಲಾಗುತ್ತದೆ ಎಂದು ಮಹಾಸಭದ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದ್ದಾರೆ.

ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದ ಸಿದ್ದರಾಮಚೈತನ್ಯ ಸ್ವಾಮೀಜಿ, ‘ಒಕ್ಕಲಿಗ ಸಮುದಾಯಕ್ಕೆ ಒಂದು ಅದಮ್ಯ ಚೇತನವನ್ನು ತಂದುಕೊಟ್ಟಿದ್ದು ಬಾಲಗಂಗಾಧರನಾಥ ಸ್ವಾಮೀಜಿ. ಒಕ್ಕಲಿಗ ಸಮುದಾಯಕ್ಕೆ ಧಾರ್ಮಿಕ ಪರಂಪರೆಯಿಲ್ಲ. ಅದೊಂದು ಅಸಂಘಟಿತ ಸಮುದಾಯವೆಂಬ ಅಪವಾದಕ್ಕೆ ಉತ್ತರವನ್ನು ಆದಿಚುಂಚನಗಿರಿ ಕ್ಷೇತ್ರವನ್ನು ಒಕ್ಕಲಿಗರ ಭಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿ, ಸಮುದಾಯಕ್ಕೆ ಧಾರ್ಮಿಕ, ಸಾಂಸ್ಕೃತಿಕ ಹಾದಿಯನ್ನು ತೋರಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದರು.

ADVERTISEMENT

ಒಕ್ಕಲಿಗರು ಪ್ರಮುಖವಾಗಿ ವ್ಯವಸಾಯ ನಂಬಿ ಬದುಕುತ್ತಿದೆ. ಪ್ರಸ್ತುತ ಒಕ್ಕಲಿಗ ಕಸುಬಿಗೆ ಬೆಲೆ ಇಲ್ಲದಂತಾಗಿದೆ. ಸಮುದಾಯ ಜೀವನೋಪಾಯಕ್ಕಾಗಿ ಬೇರೆ ವೃತ್ತಿಯನ್ನು ಅವಲಂಬಿಸಬೇಕಾಗಿದೆ. ಒಕ್ಕಲಿಗ ಸಮುದಾಯ ಇಂದು ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಸರ್ಕಾರದ ಮೀಸಲಾತಿ ನೀತಿಗಳಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ವಿದ್ಯಾವಂತ ಯುವಕರು ಉದ್ಯೋಗ ಸಿಗದೆ ಪರದಾಡುವಂತಾಗಿದೆ. ಎಲ್ಲ ಸಮಸ್ಯೆಗಳಿಂದ ಒಕ್ಕಲಿಗ ಸಮುದಾಯವನ್ನು ಹೊರತರಬೇಕಿದೆ. ಸಮುದಾಯದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಬೇಕಿದೆ. ಈ ಬಗ್ಗೆ ಚಿಂತಿಸಿ ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರಕ್ಕೆ ಧ್ವನಿ ಎತ್ತುವ ಜೊತೆಗೆ ಮೀಸಲಾತಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಹೋರಾಟ ಪ್ರಾರಂಭಿಸಬೇಕಿದೆ’ ಎಂದು ತಿಳಿಸಿದರು.

ಪುಣ್ಯ ಸ್ಮರಣೆ ಮತ್ತು ಒಕ್ಕಲಿಗರ ಧರ್ಮಸಮಾವೇಶ ಕೇವಲ ಒಕ್ಕಲಿಗರ ಸಮಾವೇಶವಲ್ಲ ಸರ್ವಜನಾಂಗದವರ ಭಾಗವಹಿಸುವಿಕೆಯು ಮತ್ತು ಕುಟುಂಬವರ್ಗದವರು, ಮಹಿಳೆಯರು ಭಾಗವಹಿಸುವ ಕಾರ್ಯಕ್ರಮವಾಗಬೇಕಿದೆ ಎಂದು ಬಿ.ಎನ್.ಜಗದೀಶ್ ಮನವಿ ಮಾಡಿದರು.

ಪುರಸಭಾ ಅಧ್ಯಕ್ಷ ನಾಗೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆಂಪೇಗೌಡ, ಜೆಡಿಎಸ್ ಮುಖಂಡರಾದ ಬಿ.ಎನ್ ಜಗದೀಶ್, ಕೆ.ಎಲ್ ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮಯ್ಯ, ರೈತ ಸಂಘದ ವೆಂಕಟೇಶ್, ಮುಖಂಡರಾದ ಮಡಕೆಹಳ್ಳಿ ಶಿವಣ್ಣ, ಕಪನಿಪಾಳ್ಯ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.