ತುಮಕೂರು: ಬೆಳಗುಂಬ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶೀಘ್ರವೇ ಪರಿಹಾರ ದೊರಕಲಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತಾಲ್ಲೂಕಿನ ಬೆಳಗುಂಬ ಗ್ರಾಮದಲ್ಲಿ ₹ 25 ಲಕ್ಷ ಅನುದಾನದಲ್ಲಿ ಸಿದ್ಧರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಡ್ಡರಹಳ್ಳಿ, ನವಿಲಹಳ್ಳಿ, ಬೆಳಗುಂಬ ಹಾಗೂ ಸುತ್ತಮುತ್ತ ಇದುವರೆಗೂ ಕುಡಿಯುವ ನೀರಿಗಾಗಿ 25ಕ್ಕೂ ಹೆಚ್ಚು ಕೊಳ್ಳಬಾವಿ ಕೊರೆಸಲಾಗಿದೆ. ಶೇ 80ರಷ್ಟು ಕೊಳವೆ ಬಾವಿಗಳು ವಿಫಲವಾಗಿವೆ. 1,200 ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ಹೀಗಾಗಿ, ಮಹಿಳೆಯರು ನನ್ನ ಮೇಲೆ ಹೆಚ್ಚು ಅಸಮಾಧಾನಗೊಂಡಿದ್ದಾರೆ. ನೀರು ದೊರೆಯುವವರೆಗೆ ಎಷ್ಟೇ ಕೊಳವೆ ಬಾವಿಯಾದರೂ ಕೊರೆಯಿಸಿ, ನೀರು ದೊರೆಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬೆಳಗುಂಬ ಸಿದ್ಧರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತೇನೆ ಎಂದು ಈ ಹಿಂದಿನ ಶಾಸಕರು ದೇವಾಲಯ ನೆಲಸಮ ಮಾಡಿಸಿ ಕೈ ತೊಳೆದುಕೊಂಡಿದ್ದರು. ನಾನು ಶಾಸಕನಾದ ಮೇಲೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹ 25 ಲಕ್ಷ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.
ಸರ್ಕಾರದ ಅನುದಾನದ ಜೊತೆಗೆ ವೈಯಕ್ತಿಕವಾಗಿ ₹ 10 ಲಕ್ಷ ನೀಡುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹಾಲೆನೂರು ಆನಂತು, ‘ಶಾಸಕ ಗೌರಿಶಂಕರ್ ಅವರು ಅಭಿವೃದ್ಧಿ ಕೆಲಸಗಳ ಮೂಲಕವೇ ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡುತ್ತಾರೆ’ ಎಂದರು.
ಬೆಳಗುಂಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ತುಮಕೂರು ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ಮಾತನಾಡಿದರು.
ವಡ್ಡರಹಳ್ಳಿ ನಾಗರಾಜು, ಬೆಳಗುಂಬ ರಂಗಸ್ವಾಮಯ್ಯ, ಕೃಷ್ಣಪ್ಪ, ಕುಮಾರಸ್ವಾಮಿ, ಸುಗುಣಾ ಸಿದ್ದರಾಜು, ವಡ್ಡರಹಳ್ಳಿ ಬಸವರಾಜು, ಕರೇ ರಂಗಪ್ಪ, ರಾಮಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.