ತುಮಕೂರು: ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿಗೆ ಹೇಮಾವತಿ ಕುಡಿಯುವ ನೀರು ಪಂಪ್ ಮಾಡುವ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಬಳ್ಳಾಪುರ ಸಮೀಪದ ಪಂಪ್ ಹೌಸ್ಗೆ ಸೋಮವಾರ ಸಂಸದ ಜಿ.ಎಸ್. ಬಸವರಾಜು, ಮಾರ್ಕೆಟಿಂಗ್ ಫೆಡರೇಷನ್ ನಿರ್ದೇಶಕ ಮುಖಂಡ ಆರ್.ರಾಜೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ಬಳಿಕ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು,‘ ಪಂಪ್ ಹೌಸ್ನಲ್ಲಿದ್ದ ₹ 10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಯಂತ್ರಗಳು ಕಳವಾಗಿವೆ. ಯಂತ್ರಗಳನ್ನು ತಂದು ತುರ್ತಾಗಿ ದುರಸ್ತಿ ಮಾಡಬೇಕು. ಕೊರಟಗೆರೆ ಅಗ್ರಹಾರ ಕೆರೆಗೆ ಹಾಗೂ ಮಂಗಳವಾರ ಸಂಜೆಯ ಹೊತ್ತಿಗೆ ಮಧುಗಿರಿ ಸಿದ್ಧಾಪುರ ಕೆರೆಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
ಆರ್.ರಾಜೇಂದ್ರ ಮಾತನಾಡಿ, ‘ಮಧುಗಿರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. 20 ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತಿದೆ. ಮಧುಗಿರಿ ಸಿದ್ಧಾಪುರ ಕೆರೆಗೆ ಹೇಮಾವತಿ ನೀರು ಸರಬರಾಜಾಗುವ ತುಮಕೂರು ಗ್ರಾಮಾಂತರದ ಬಳ್ಳಾಪುರ ಪಂಪ್ಹೌಸ್ನಲ್ಲಿ ಯಂತ್ರೋಪಕರಣಗಳು ಕಳುವಾಗಿವೆ. ದುರಸ್ತಿಕಾರ್ಯ ನಡೆಯುತ್ತಿದೆ. ಮಂಗಳವಾರ ಸಂಜೆ ಹೊತ್ತಿಗೆ ಸಿದ್ಧಾಪುರ ಕೆರೆಗೆ ನೀರು ಹರಿಯಲಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಹೇಳಿದರು.
ಯಂತ್ರೋಪಕರಣಗಳು ಕಳವು ಆಗಿರುವುದೇ ಕೆರೆಗೆ ನೀರು ಹರಿಯಲು ವಿಳಂಬವಾಗುತ್ತಿದೆ. ಮಧುಗಿರಿ ಶಾಸಕರು ಈ ಪಂಪ್ ಹೌಸ್ಗೆ ಸೌಜನ್ಯಕ್ಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ತುರ್ತು ಗಮನಹರಿಸಿದ್ದರೆ ಈ ವೇಳೆಗಾಗಲೇ ಸಿದ್ದಾಪುರ ಕೆರೆಗೆ ನೀರು ಹರಿಯಬೇಕಿತ್ತು ಎಂದರು.
ಸಿದ್ಧಾಪುರ ಕೆರೆ ತುಂಬಿಸಿ ಮಧುಗಿರಿಗೆ ಹೆಚ್ಚಿನ ನೀರು ಬಿಡುಗಡೆ ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದು ಸಂಸದರಾದ ಜಿ.ಎಸ್. ಬಸವರಾಜು ಅವರು ಭರವಸೆ ನೀಡಿದ್ದಾರೆ. ಇದರಿಂದ ಮಧುಗಿರಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ, ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಲೋಹಿತ್, ಮಧುಗಿರಿ ಪುರಸಭೆ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.