ತುಮಕೂರು: ನಗರದಲ್ಲಿ 24X7 ನೀರು ಸರಬರಾಜು ಯೋಜನೆ ಹಳಿ ತಪ್ಪಿದ್ದು, ನಿರಂತರ ಪೂರೈಕೆ ಕನಸಾಗಿಯೇ ಉಳಿದಿದೆ. ಹಲವು ಕಡೆ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿಲ್ಲ!
ಸಮರ್ಪಕವಾಗಿ ನೀರು ಒದಗಿಸುವ ಉದ್ದೇಶದಿಂದ 2016ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯಾಪ್ತಿಗೆ ಯೋಜನೆ ವಹಿಸಲಾಗಿತ್ತು. ಒಟ್ಟು ಮೂರು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2023ರಲ್ಲಿ ಕೆಲಸ ಪೂರ್ಣಗೊಂಡಿದ್ದು, ಪ್ರತಿ ಮನೆಗೆ ನೀರು ಮಾತ್ರ ಹರಿಯುತ್ತಿಲ್ಲ. ಮನೆ ಮನೆಗೆ ನೀರು ನೀಡುವ ಉದ್ದೇಶದಿಂದ ₹301 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಯಡಿ ಅಳವಡಿಸಿದ ನಲ್ಲಿ, ಪೈಪ್ಗಳು ಈಗಾಗಲೇ ಹಾಳಾಗಿ ಮೂಲೆ ಸೇರಿವೆ.
ನಿರಂತರ ನೀರು ಸರಬರಾಜು ಯೋಜನೆ, ಅಮೃತ್ ಯೋಜನೆ, ಅಮೃತ್ ಹೆಚ್ಚುವರಿ ಅನುದಾನದಡಿ ಕಾಮಗಾರಿ ನಡೆಸಲಾಗಿದೆ. 71,425 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ನಗರದಾದ್ಯಂತ 985 ಕಿ.ಮೀ ಹೊಸದಾಗಿ ಪೈಪ್ಲೈನ್ ಮಾಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 44 ನೀರಿನ ಟ್ಯಾಂಕ್ಗಳಿವೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಇವುಗಳನ್ನು 37 ಡಿಎಂಎ (ಡಿಸ್ಟ್ರಿಕ್ ಮೀಟರ್ ಏರಿಯಾ) ಎಂದು ವಿಭಾಗಿಸಿ, ಪ್ರತಿ ಟ್ಯಾಂಕ್ನಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ರೂಪಿಸಿದ್ದರು.
13 ಕಡೆ ನೀರು ಬಂದ್: ಪ್ರಸ್ತುತ 37 ಡಿಎಂಎ ಪೈಕಿ 13 ಕಡೆಯಿಂದ (ಟ್ಯಾಂಕ್) 24X7 ನಲ್ಲಿಗಳಿಗೆ ನೀರು ಹೋಗುತ್ತಿಲ್ಲ. ಪ್ರಮುಖವಾಗಿ ಅಶೋಕ ನಗರ, ಕ್ಯಾತ್ಸಂದ್ರ, ಚಿಕ್ಕಪೇಟೆ, ಶಿಶುವಿಹಾರ, ಗೋಕುಲ ಬಡಾವಣೆ, ಸದಾಶಿವನಗರ, ಗಾಂಧಿನಗರ, ರಾಜೀವ್ಗಾಂಧಿ ನಗರ, ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ, ವಿದ್ಯಾನಗರ, ಎಸ್ಐಟಿ ಭಾಗದಲ್ಲಿ ತುಂಬಾ ಸಮಸ್ಯೆಯಾಗುತ್ತಿದೆ. ಈ ಭಾಗದ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಅಗೆಯುವಾಗ ಪೈಪ್ಲೈನ್ಗೆ ಹಾನಿಯಾಗಿದೆ. ಚರಂಡಿ, ಯುಜಿಡಿ ಕಾಮಗಾರಿ ಸಮಯದಲ್ಲೂ ಪೈಪ್ ಹಾಳಾಗಿದೆ. ಇದರ ಜತೆಗೆ ಕಾಮಗಾರಿ ವೇಳೆ ಕಳಪೆ ಗುಣಮಟ್ಟದ ನಲ್ಲಿ, ಪೈಪ್ ಬಳಸಿದ ಪರಿಣಾಮ ಕೆಲವೇ ದಿನಗಳಲ್ಲಿ ಹಾಳಾಗಿ ನಿಂತಿವೆ.
ಕೊಳಚೆ ನೀರು ಪೂರೈಕೆ: ‘ಶಾಂತಿ ನಗರದ ಮನೆಗಳಿಗೆ ಕೊಳಚೆ ನೀರು ಪೂರೈಸಲಾಗುತ್ತಿದೆ. ನಲ್ಲಿಯಲ್ಲಿ ನೀರು ಬರುವ ಪ್ರತಿ ಸಾರಿ ಇದು ಸಾಮಾನ್ಯವಾಗಿದೆ. ಇದರಿಂದ ಅನೇಕ ರೋಗಗಳು ಹರಡುತ್ತಿವೆ’ ಎಂದು ಇಲ್ಲಿನ ನಿವಾಸಿ ದುರುಗಮ್ಮ ಹೇಳುತ್ತಾರೆ.
ಬುಗುಡನಹಳ್ಳಿ ನೀರು ನಗರಕ್ಕೆ ಪೂರೈಸಲಾಗುತ್ತದೆ. ಅಲ್ಲಿಂದ ಪಿಎನ್ಆರ್ ಪಾಳ್ಯದ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನಂತರವೇ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
2016ರಲ್ಲಿ ಯೋಜನೆಗೆ ಚಾಲನೆ 2023ರಲ್ಲಿ ಕಾಮಗಾರಿ ಮುಕ್ತಾಯ ಪಾಲಿಕೆ ವ್ಯಾಪ್ತಿಯಲ್ಲಿ 44 ಟ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.