ಮಧುಗಿರಿ: ನಾದಿನಿಯ ಕೈ ಕತ್ತರಿಸಿದ್ದ ಭಾವನಿಗೆ ಪಟ್ಟಣದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 7 ವರ್ಷ ಸಾದಾ ಸಜೆ ಮತ್ತು ₹ 30 ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಸೀಮಾಂಧ್ರದ ಮಡಕಶಿರಾ ತಾಲ್ಲೂಕಿನ ಭಕ್ತರಹಳ್ಳಿಯ ಹನುಮಂತ ಶಿಕ್ಷೆಗೊಳಗಾದವರು.
2020ರ ಮಾರ್ಚ್ 15ರಂದು ಮಧುಗಿರಿ ತಾಲ್ಲೂಕಿನ ಡಿ.ವಿ. ಹಳ್ಳಿಯ ತನ್ನ ಮಾವ ತಿಪ್ಪೇಸ್ವಾಮಿ ಅವರ ಮನೆಗೆ ಬಂದಿದ್ದ ಆರೋಪಿಯು ತನ್ನ ಹೆಂಡತಿ ಅನಿತಾ ಮೇಲೆ ಅನುಮಾನಪಟ್ಟು ಮಚ್ಚಿನಿಂದ ಆಕೆಗೆ ಹೊಡೆದು ಕೊಲೆಗೆ ಯತ್ನಿಸಿದ್ದ. ಆಗ ಮನೆಯಲ್ಲಿದ್ದ ಅನಿತಾ ಅವರ ತಂಗಿ ಮೇಘನಾ ತನ್ನ ಕೈಯನ್ನು ಅಡ್ಡ ಇಟ್ಟಾಗ ಆರೋಪಿಯು ಬೀಸಿದ ಮಚ್ಚಿನ ಏಟಿಗೆ ಆಕೆಯ ಎಡಗೈನ ಮುಂಗೈ ಕತ್ತರಿಸಿ ಹೋಗಿತ್ತು.
ಈ ಸಂಬಂಧ ಅಂದಿನ ಪಿಎಸ್ಐ ಎಲ್. ಕಾಂತರಾಜು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ. ಯಾದವ ಅವರು ಆರೋಪಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ₹ 5 ಸಾವಿರವನ್ನು ಆರೋಪಿಯ ಪತ್ನಿಗೆ ಮತ್ತು ₹ 20 ಸಾವಿರವನ್ನು ಮೇಘನಾಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.