ತುಮಕೂರು: ತಾಲ್ಲೂಕಿನ ಮುದ್ದರಾಮಯ್ಯನಪಾಳ್ಯದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಕೊಲೆ ಮಾಡಿ ಮನೆಯ ಪಕ್ಕದ ಜಮೀನಿನಲ್ಲಿ ಹೂತಿಟ್ಟಿದ್ದ. ಘಟನೆ ನಡೆದ ಐದು ದಿನಗಳ ನಂತರ ಕೊಲೆಯ ರಹಸ್ಯ ಬಹಿರಂಗಗೊಂಡಿದೆ.
ಆರೋಪಿ ಮುದ್ದರಾಮಯ್ಯನಪಾಳ್ಯದ ನಂಜುಂಡಪ್ಪ (62) ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿಯ ಸಿದ್ಧಗಂಗಮ್ಮ (45) ಕೊಲೆಯಾದ ಮಹಿಳೆ.
‘ಸೋಮವಾರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ನಂತರ ಮತ್ತಷ್ಟು ವಿಚಾರಗಳು ತಿಳಿಯಲಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 22ರಂದು ರಾತ್ರಿ ಸಿದ್ಧಗಂಗಮ್ಮ ಮುದ್ದರಾಮಯ್ಯಪಾಳ್ಯಕ್ಕೆ ಬಂದಿದ್ದರು. ಈ ವೇಳೆ ಹಣಕಾಸಿನ ವಿಚಾರಕ್ಕೆ ಇಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನಿನಲ್ಲಿ ಅಡಿಕೆ ಗಿಡಗಳಿಗೆ ನೀರು ಬಿಡಲು ತೆಗೆದಿದ್ದ ಕಾಲುವೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೆಣ ಹೂತಿಟ್ಟಿದ್ದಾನೆ.
ಪತಿ ದೂರು: ವಾರದಿಂದ ಸಿದ್ಧಗಂಗಮ್ಮ ಕಾಣಿಸುತ್ತಿಲ್ಲ ಎಂದು ಪತಿ ಸಿದ್ದಲಿಂಗಯ್ಯ ಕೊರಟಗೆರೆ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದರು. ದೂರಿನಲ್ಲಿ ನಂಜುಂಡಪ್ಪ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಮಾಹಿತಿ ಹೊರ ಬಂದಿದೆ.
ನಂಜುಂಡಪ್ಪ ಬೆಳಧರ ಸಮೀಪದ ಕ್ರಶರ್ ಬಳಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವಾಗ ಸಿದ್ಧಗಂಗಮ್ಮ ಪರಿಚಯವಾಗಿತ್ತು. ಸುಮಾರು 25 ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಗಲಾಟೆಯಾಗಿತ್ತು. ನಂತರ ಇಬ್ಬರು ದೂರವಾಗಿದ್ದು, ಈಚೆಗೆ ಮತ್ತೆ ಮೊಬೈಲ್ನಲ್ಲಿ ಮಾತನಾಡಲು ಶುರು ಮಾಡಿದ್ದರು ಎಂಬುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಜಾತ್ರೆಗೆ ಹೋಗಿದ್ದ ಪತ್ನಿ
ನಂಜುಂಡಪ್ಪ ಪತ್ನಿ ಜಾತ್ರೆಗಾಗಿ ಮಧುಗಿರಿಗೆ ತೆರಳಿದ್ದರು. ಯಾರೂ ಇಲ್ಲದ ಸಮಯ ನೋಡಿಕೊಂಡು ಸಿದ್ಧಗಂಗಮ್ಮ ಮುದ್ದರಾಮಯ್ಯನಪಾಳ್ಯಕ್ಕೆ ಬಂದಿದ್ದರು. ನಂಜುಂಡಪ್ಪ ಬಳಿ ₹10 ಸಾವಿರ ಹಣ ಕೇಳಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿದ್ದು ನಂಜುಂಡಪ್ಪ ದೊಣ್ಣೆಯಿಂದ ತಲೆ ಕುತ್ತಿಗೆಗೆ ಹೊಡೆದಿದ್ದು ಸಿದ್ಧಗಂಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.