ಕುಣಿಗಲ್: ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರ ಆರೋಗ್ಯದ ಕಡೆ ಗಮನ ಹರಿಸಿದ ಅಧಿಕಾರಿಗಳು ಠಾಣಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಪ್ರಾಂಗಣದಲ್ಲೇ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ.
ಲಾಕ್ಡೌನ್ ಆರಂಭವಾದ ದಿನದಿಂದಲೂ ಪೊಲೀಸರು ಕೊರೊನಾ ನಿಯಂತ್ರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಈಗ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಪೊಲೀಸ್ ಠಾಣಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಠಾಣೆ ಆವರಣದ ಪ್ರಾಂಗಣಕ್ಕೆ ಕಚೇರಿ ವ್ಯವಸ್ಥೆಯನ್ನು ಸ್ಥಳಾಂತರಿಸಿದ್ದಾರೆ.
ಠಾಣೆಗೆ ಬರುವ ಮೊದಲು ಕೈಕಾಲು ತೊಳೆದು, ಸ್ಯಾನಿಟೈಸರ್ ಬಳಕೆಯ ನಂತರ ಪ್ರಾಂಗಣದ ಮುಂಭಾಗ ನಿರ್ಮಿಸಿರುವ ತಾತ್ಕಾಲಿಕ ವ್ಯವಸ್ಥೆಯ ಆವರಣದಲ್ಲಿಯೇ ಅಂತರ ಕಾಪಾಡಿಕೊಂಡು ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳ ವಿಚಾರಣೆಯನ್ನು ಸಹ ಆವರಣದಲ್ಲಿಯೇ ಮಾಡಲಾಗುತ್ತಿದೆ, ವಿಶೇಷ ಪ್ರಕರಣ ಮತ್ತು ವಿಚಾರಣೆಯನ್ನು ಮಾತ್ರ ಠಾಣೆ ಒಳಗೆ ನಡೆಸಲಾಗುತ್ತದೆ.
‘ಕೊರೊನಾ ಭೀತಿಯಲ್ಲಿರುವುದರಿಂದ ಸಿಬ್ಬಂದಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ಬದಲಾಣೆ ಮಾಡಲಾಗಿದೆ’ ಎಂದು ಡಿವೈಎಸ್ಪಿ ಜಗದೀಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.