ತುಮಕೂರು: ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಕಿಲ್ ಪಾರ್ಕ್ ಮಂಜೂರಾತಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಸಂಸದ ಜಿ.ಎಸ್. ಬಸವರಾಜು ಭರವಸೆ ನೀಡಿದರು.
ನಗರದಲ್ಲಿ ಶನಿವಾರ ಸ್ಕಿಲ್ ಪಾರ್ಕ್ ಸ್ಥಾಪನೆ ಕುರಿತು ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಸ್ಕಿಲ್ ಪಾರ್ಕ್ ಸೇರಿದಂತೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಸ್ತಾವ ಸಲ್ಲಿಸಿದರೂ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಲಾಗುವುದು ಎಂದರು
ಜಿಲ್ಲೆಯಲ್ಲಿರುವ 342 ಬ್ಯಾಂಕುಗಳು ಸಹ ಒಂದೊಂದು ಉತ್ಪನ್ನಗಳಿಗೆ ಒಂದೊಂದು ಜಾತಿಯ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಬೇಕು. ಈ ಮೂಲಕ ಸ್ಕಿಲ್ ಪಾರ್ಕ್ನಲ್ಲಿ ಸಂಶೋಧನೆ, ಡೇಟಾ ಬೇಸ್ ಮತ್ತು ರಫ್ತು ಚಟುವಟಿಕೆ ಮೂಲಕ ರೈತರ ಆದಾಯ ದುಪ್ಪಟ್ಟು ಮಾಡಲು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ನಗರದ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ಸರ್ಕಾರಿ ಆಸ್ತಿಗಳ ಗುರುತು( ಲೇಯರ್) ಮಾಡದೇ ಇದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿ 30 ಸಾವಿರ ಜನರು ನಿವೇಶನ ಮತ್ತು ವಸತಿ ರಹಿತರು ಇದ್ದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ಜನರಿಗೆ ಮಾಡಿದ ದ್ರೋಹ. ಪಾಲಿಕೆ ನೌಕರರು ಆಯುಕ್ತರ ಮೇಲೆ ದೂರು ಹೇಳುವ ಮೊದಲು ತಮ್ಮ ಜವಾಬ್ಧಾರಿ ಅರಿತು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರ ಮನವಿ ಮೇರೆಗೆ ಸ್ಕಿಲ್ ಪಾರ್ಕ್ ಸ್ಥಾಪನೆಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಶಾಲಿನಿ ರಜನೀಶ್ ಅವರ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವುದಾಗಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ತಿಳಿಸಿದರು.
ಸಭೆಯಲ್ಲಿ ಶಕ್ತಿಪೀಠ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಕುಂದರನಹಳ್ಳಿ ರಮೇಶ್, ತುಮಕೂರು ಐಐಇ ಜಿಲ್ಲಾ ಅಧ್ಯಕ್ಷ ಡಿ.ಎಸ್.ಸುರೇಶ್, ಬೆಂಗಳೂರಿನ ನಂದಿ ಡಿಸೈನ್ ಗ್ರೂಪ್ನ ಪಾಟೀಲ್, ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ, ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ ಕಂಪನಿ ತುಮಕೂರು ಇವರು ಸ್ಕಿಲ್ ಪಾರ್ಕ್ ಬಗ್ಗೆ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು.
ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ರಘೋತ್ತೋಮರಾವ್, ಚಂದ್ರಶೇಖರ್, ನರಸಿಂಹಮೂರ್ತಿ, ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.