ಬೆಂಗಳೂರು: ‘ಹೊಸ ಮಾಹಿತಿ ತಂತ್ರಜ್ಞಾನ(ಐ.ಟಿ) ನಿಯಮಗಳಿಗೆ ಟ್ವಿಟರ್ ಇಂಡಿಯಾ ಕಂಪನಿ ಬದ್ಧರಾಗದ ಕಾರಣ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿನ ವಿನಾಯಿತಿಗಳು ಈ ಸಂಸ್ಥೆಗೆ ಅನ್ವಯ ಆಗುವುದಿಲ್ಲ’ ಎಂದು ಉತ್ತರ ಪ್ರದೇಶ ಪೊಲೀಸರು ಹೈಕೋರ್ಟ್ಗೆ ವಿವರಣೆ ಸಲ್ಲಿಸಿದ್ದಾರೆ.
ವೃದ್ಧನ ಮೇಲಿನ ಹಲ್ಲೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆದ ಪ್ರಕರಣದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಆರ್ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನಿಶ್ ಮಹೇಶ್ವರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
‘ದೂರು ಸ್ವೀಕರಿಸಿ ನಿವಾರಿಸುವ ವ್ಯವಸ್ಥೆಯನ್ನೇ ಟ್ವಿಟರ್ ಮಾಡಿಕೊಂಡಿಲ್ಲ. ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ, ಭಯ ಉಂಟು ಮಾಡುವ ಟ್ವೀಟ್ಗಳನ್ನು ಅಳಿಸುವ ವ್ಯವಸ್ಥೆಯೂ ಇಲ್ಲ. ಟ್ವಿಟರ್ನ ಮೂವರು ನಿರ್ದೇಶಕರಲ್ಲಿ ಯಾರೂ ಭಾರತದ ನಿವಾಸಿಗಳಲ್ಲ. ಆದ್ದರಿಂದ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಂದು ಹೇಳಿಕೊಂಡಿರುವ ಮನಿಶ್ ಮಹೇಶ್ವರಿ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸರ ಪರ ವಕೀಲರು ವಿವರಿಸಿದರು.
‘ಸಿಆರ್ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ನೀಡಿರುವುದನ್ನು ಗಮನಿಸಿದರೆ ಬಂಧಿಸುವ ಸಾಧ್ಯತೆ ಇದೆ. ನೋಟಿಸ್ ರದ್ದುಪಡಿಸಬೇಕು’ ಎಂದು ಮನಿಶ್ ಕೋರಿದ್ದು, ವಿಚಾರಣೆ ಗುರುವಾರವೂ ಮುಂದುವರಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.