ADVERTISEMENT

ಅಭಿವೃದ್ಧಿ ದಿಕ್ಕು ಬದಲಿಸುವ ಶಕ್ತಿ ಪಿಡಿಒಗೆ ಇದೆ

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿಇಒ ಶಿವಾನಂದ ಕಾಪಶಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 8:57 IST
Last Updated 19 ಜೂನ್ 2018, 8:57 IST
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ತರಭೆತಿ ಕಾರ್ಯಗಾರವನ್ನು ಶಾಸಕ ಕೆ. ರಘುಪತಿ ಭಟ್‌ ಉದ್ಘಾಟಿಸಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ತರಭೆತಿ ಕಾರ್ಯಗಾರವನ್ನು ಶಾಸಕ ಕೆ. ರಘುಪತಿ ಭಟ್‌ ಉದ್ಘಾಟಿಸಿದರು.   

ಉಡುಪಿ: ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಆಮಿಷಗಳಿಗೆ ಒಳಗಾಗದೇ, ನಿಯಮಗಳ ಪಾಲನೆ ಜೊತೆಗೆ ಸಮಾಜಮುಖಿಯಾಗಿ ಹಾಗೂ   ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಅಂಬಲಪಾಡಿ ಪ್ರಗತಿಸೌಧದಲ್ಲಿ ಪಿಡಿಒಗಳಿಗೆ ಏರ್ಪಡಿಸಿದ್ದ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವ ಯೋಜನೆಗಳನ್ನು ಗ್ರಾಮೀಣ ಜನತೆಗೆ ತಲುಪಿಸುವಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇರುವಂಥವರು. ಹಾಗಾಗಿ, ನಿರಂತರವಾಗಿ ಜನರ ಸಂಪರ್ಕ ಹೊಂದಿರಬೇಕು. ಸರ್ಕಾರ ನೀಡಿರುವ ಅಧಿಕಾರ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಕರ್ತವ್ಯ ನಿರ್ವಹಣೆ ಸಮಯದಲ್ಲಿ ಕಾನೂನಾತ್ಮಕ ಅಧಿಕಾರ ಚಲಾಯಿಸುವುದರ ಜೊತೆಗೆ ಸಮಾಜಸೇವೆಯ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿಇಒ ಶಿವಾನಂದ ಕಾಪಶಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯ ದಿಕ್ಕು ಬದಲಿಸುವ ಅವಕಾಶ ಪಿಡಿಒಗಳಿಗೆ ಇದೆ. ಕಾನೂನು ನಿಯಮಗಳನ್ನು ಅರ್ಥೈಸಿಕೊಂಡು, ಜನಪ್ರತಿನಿಧಿಗಳ ಸಹಕಾರ ಪಡೆದು ಕಾರ್ಯನಿರ್ವಹಿಸಿ. ಸರ್ಕಾರದ 29 ಇಲಾಖೆಗಳ ಹಲವು ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನೇರ ಜವಾಬ್ದಾರಿ ಪಿಡಿಒಗಳಿಗಿದ್ದು, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಎಂದರು.

ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಶಿಕ್ಷಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ , ಜಯವಂತ ರಾವ್ ಹಿರಿಯಡ್ಕ, ಡಿಮೆಲ್ಲೋ , ಮಮತಾ ಉಪಸ್ಥಿತರಿದ್ದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ.ಡಿ.ಅರ್.ಪಿ ಯ ಪ್ರಾಂಶುಪಾಲ ಅಶೋಕ್ ಸ್ವಾಗತಿಸಿದರು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹಿರಿಕೃಷ್ಣ ಶಿವತ್ತಾಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.