ADVERTISEMENT

`ಉಡುಪಿಯಲ್ಲಿ ಮಹಿಳಾ ಠಾಣೆ'

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 11:12 IST
Last Updated 19 ಜೂನ್ 2013, 11:12 IST

ಉಡುಪಿ: `ಉಡುಪಿಯಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಶೀಘ್ರವಾಗಿ ತೆರೆಯಲಾಗುವುದು' ಎಂದು ಗೃಹ ಸಚಿವ ಕೆ. ಜೆ. ಜಾರ್ಜ್ ಹೇಳಿದರು.

ಗೃಹ ಸಚಿವರಾಗಿ ಉಡುಪಿ ಜಿಲ್ಲೆಗೆ ಮಂಗಳವಾರ ಆಗಮಿಸಿದ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಪೊಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ದೂರು ನೀಡಲು ಠಾಣೆಗಳಿಗೆ ಯಾರೇ ಬಂದರೂ ಅವರ ದೂರು ಸ್ವೀಕರಿಸಬೇಕು. ಪೊಲೀಸ್ ಇಲಾಖೆಯಲ್ಲೂ ಉತ್ತಮ ಅಧಿಕಾರಿಗಳಿದ್ದಾರೆ. ಆದರೆ, ಕೆಲವೇ ಮಂದಿಯಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬಂದಿದೆ ಎಂದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತವನ್ನು ಜನತೆ ನಿರೀಕ್ಷಿಸುತ್ತಿದ್ದಾರೆ. ಜಾತ್ಯಾತೀತ ನೆಲೆಯಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಅನ್ಯಾಯವಾಗದಂತೆ ಆಡಳಿತ ನೀಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

`ಕರಾವಳಿ ಭಾಗವನ್ನು ಬಿಜೆಪಿಯು ಕೆಲವು ಸಂಘಟನೆಗಳ ಮೂಲಕ ಧರ್ಮ, ಜಾತಿ ಮತ್ತು ಭಾಷೆ ಹೆಸರಿನಲ್ಲಿ ವಿಭಜಿಸುವ ಹುನ್ನಾರ ನಡೆಸಿದೆ. ಅದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಿದ್ದಾರೆ. ಜನತೆ ಭಯ ಮುಕ್ತ ವಾತಾವರಣದಲ್ಲಿ ಬದುಕುವಂತಾಗಬೇಕು. ಯಾವುದಾದರೂ ಅಹಿತಕರ ಘಟನೆ ನಡೆದ ಬಳಿಕ ಪೊಲೀಸರು ಅದಕ್ಕೆ ಪರಿಹಾರ ಕಂಡುಕೊಳ್ಳುವ ಬದಲು, ಸಮಾಜಘಾತಕ ಶಕ್ತಿಗಳಿಂದಾಗುವ ಸಂಭವನೀಯ ಘಟನೆಗಳನ್ನು ಮುಂಚಿತವಾಗಿಯೇ ಕಂಡುಕೊಂಡು ಮುನ್ನೆಚ್ಚರಿಕೆ ವಹಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್ ಸೊರಕೆ ಹೇಳಿದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಬಸವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ಮುಖಂಡರಾದ ಜಯಶ್ರೀ ಕೃಷ್ಣರಾಜ್, ಸರಸು ಬಂಗೇರ, ಕೆ.ಕೆ. ಸರಳಾಯ, ಮಂಜುನಾಥ ಭಂಡಾರಿ, ಅಶೋಕ ಕುಮಾರ್ ಕೊಡವೂರು, ನರಸಿಂಹ ಮೂರ್ತಿ, ಜನಾರ್ದನ ತೋನ್ಸೆ, ಕೇಶವ ಕುಂದರ್, ಮೊಯಿದ್ದೀನಬ್ಬ, ನವೀನ್‌ಚಂದ್ರ ಶೆಟ್ಟಿ, ಸುಧೀರ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಭುಜಂಗ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಹಿರಿಯಣ್ಣ, ಸುಧಾಕರ ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.