
ಉಡುಪಿ: ‘ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಈ ಬಾರಿ ಆರು ತಂಡಗಳು ಭಾಗವಹಿಸಿದ್ದು ಮುಂದಿನ ವರ್ಷದಿಂದ ಎಂಟು ತಂಡಗಳಿಗೆ ಅವಕಾಶ ನೀಡಲಾಗುವುದು. ಅದರಲ್ಲಿ ದುಬೈನ ಒಂದು ತಂಡ ಪಾಲ್ಗೊಳ್ಳಲಿದ್ದು, ಲೀಗ್ ಪಂದ್ಯಾವಳಿಯನ್ನು ಭಾರತ ಮತ್ತು ದುಬೈನಲ್ಲಿ ಆಯೋಜಿಸಲಾಗುವುದು’ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಡಾ. ಅಖಿಲೇಶ್ ದಾಸ್ ಗುಪ್ತ ಹೇಳಿದರು.
ಮಣಿಪಾಲ ವಿಶ್ವವಿದ್ಯಾಲಯದ ಕ್ರೀಡಾ ಸಮುಚ್ಛಯ ‘ಮರೇನ’ದಲ್ಲಿ ಭಾನುವಾರ ಆರಂಭವಾದ ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಮಹಿಳಾ ಮತ್ತು ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವರ್ಷ ಮಣಿಪುರದಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಕಾಡೆಮಿ ಸ್ಥಾಪಿಸಲಾಗುವುದು ಎಂದರು.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಡಾ. ವಿಜಯ್ ಸಿನ್ಹಾ, ಮಣಿಪಾಲ ವಿ.ವಿಯ ಕುಲಪತಿ ಡಾ. ರಾಮದಾಸ್ ಪೈ, ಉಪ ಕುಲಪತಿ ಡಾ. ಕೆ. ರಾಮನಾರಾಯಣ್, ರಿಜಿಸ್ಟ್ರಾರ್ ಡಾ. ಜಿ.ಕೆ. ಪ್ರಭು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೆ.ಸಿ.ಚಂದ್ರ, ಉದ್ಯಮಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಇದೇ 19ರ ವರೆಗೆ ಮಣಿಪಾಲ ವಿಶ್ವವಿದ್ಯಾಲಯದ ಕ್ರೀಡಾ ಸಮುಚ್ಛಯ ‘ಮರೇನ’ ಮತ್ತು ಮಣಿಪಾಲ್ ತಾಂತ್ರಿಕ ಸಂಸ್ಥೆಯ ಬ್ಯಾಡ್ಮಿಂಟನ್ ಅಂಕಣದಲ್ಲಿ ಪಂದ್ಯಾವಳಿ ನಡೆಯಲಿದೆ. ಪುರುಷರ ವಿಭಾಗದಲ್ಲಿ 70 ಮತ್ತು ಮಹಿಳಾ ವಿಭಾಗದಲ್ಲಿ 67 ವಿಶ್ವವಿದ್ಯಾಲಯಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ.
ರಾಷ್ಟ್ರೀಯ ತೀರ್ಪುಗಾರ ಸತೀಶ್ ಮಲ್ಯ, ಕ್ರೀಡಾಪಟು ಅರ್ಚನಾ ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಸ್ವಾಗತಿಸಿದರು. ಬಾಲಕೃಷ್ಣ ಮದ್ದೋಡಿ ಹಾಗೂ ಪ್ರೀಮಾ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ಡಾ.ವಿನೋದ್ ಸಿ ನಾಯಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.