ADVERTISEMENT

ಕುಂದಾಪುರದಲ್ಲಿ ಅಗ್ರಿಮಾರ್ಟ್ ಮಳಿಗೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:15 IST
Last Updated 22 ಅಕ್ಟೋಬರ್ 2012, 7:15 IST

ಕುಂದಾಪುರ: ಕೂಲಿ ಕಾರ್ಮಿಕರ ಸಮಸ್ಯೆ, ಅಧಿಕ ಕೂಲಿ ಭತ್ಯೆ, ಯುವ ಕಾರ್ಮಿಕರ ನಗರ ವಲಸೆ ಕಾರಣಗಳಿಂದ ಕೃಷಿ ಚಟುವಟಿಕೆಗಳು ಹಿನ್ನೆಡೆಯಾಗಿದ್ದು, ಈ ಸಮಸ್ಯೆ ಪರಿಹರಿಸಿಕೊಳ್ಳಲು ಹೊಸ ತಲೆಮಾರಿನ ಅಗತ್ಯವಿರುವ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕೈಗೊಂಡಾಗ ಮಾತ್ರ ಲಾಭದಾಯಕವಾಗಲು ಸಾಧ್ಯ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು.

ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಡಿಪೋ ಎದುರಿನ ವಾಣಿಜ್ಯ ಸಂಕೀರ್ಣದಲ್ಲಿ ಬೆಂಗಳೂರಿನ ರತ್ನಗಿರಿ ಇಂಪೆಕ್ಸ್ ಮತ್ತು ಪುತ್ತೂರಿನ ಸಾಯ ವೆಂಚರ್ ಸಹಯೋಗದಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಅಗ್ರಿಮಾರ್ಟ್ ಕೃಷಿ ಯಂತ್ರೋಪಕರಣ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ರೈತರಿಗೆ ಇಂಥ ಒಂದು ಮಳಿಗೆ  ಅಗತ್ಯ ಇತ್ತು. ತೋಟ, ಹೊಲ ನಿರ್ವಹಣೆಯಲ್ಲಿ ಯಂತ್ರಗಳ ಬಳಕೆ ಅಗತ್ಯವಾಗಿದೆ.

ಕೃಷಿಯಲ್ಲಿ ಸಮಗ್ರ ಬದಲಾವಣೆ ಮತ್ತು ಪ್ರಗತಿ ಸಾಧಿಸಲು ಇಂದು ಯಂತ್ರಗಳ ಬಳಕೆ ಅನಿವಾರ್ಯ ಆಗುತ್ತಿರುವುದರಿಂದ ರೈತರು ಸೂಕ್ತ ಯಂತ್ರಗಳನ್ನು ಬಳಸುವಂತಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಳಿಗೆಯ ಮಾರಾಟ ಉತ್ಪನ್ನಗಳ ಕುರಿತು ಮಾಹಿತಿ ನೀಡಿದ ಗೋವಿಂದ ಪ್ರಕಾಶ್ ಸಾಯ ಅವರು ರೈತರಿಗೆ, ತೋಟಗಾರಿಕೆ ಹಾಗೂ ಕೃಷಿಗೆ ಉಪಯುಕ್ತವಾಗಲೆಂದು ಅಗ್ರಿಮಾರ್ಟ್‌ನಲ್ಲಿ 200 ಕ್ಕೂ ಹೆಚ್ಚು ವಿವಿಧ ಮಾದರಿಯ ಸಲಕರಣೆಗಳು ಲಭ್ಯವಿದೆ. ಒಲಿಯೋಮ್ಯೋಕ್, ಅಗ್ರಿಮೇಟ್, ಗುಲಿವರ್, ಕೋಯಿಮಾ ಸಂಸ್ಥೆಗಳ ಸಲಕರಣೆಗಳು ಮತ್ತು ಇದಕ್ಕೆ ಸೂಕ್ತ ಮಾರಾಟ ನಂತರದ ಸೇವೆಯನ್ನು ಈ ಮಾರ್ಟ್ ಮೂಲಕ ರೈತರು ಪಡೆಯಬಹುದು ಎಂದರು. 

 ಕಳೆ ಕತ್ತರಿಸುವ ಯಂತ್ರ, ಹುಲ್ಲು ಹಾಸು ಕತ್ತರಿಸುವ ಯಂತ್ರ, ಬೇಲಿ ಸವರುವ ಯಂತ್ರ, ಯಾಂತ್ರಿಕ ಗರಗಸ, ರೋಟರಿ ಟಿಲ್ಲರ್, ಕೈಗಾರಿಕಾ ಶುದ್ಧೀಕರಣಕ್ಕೆ ಬೇಕಾಗುವ ಪರಿಣಾಮಕಾರಿ ಪ್ರಶರ್ ವಾಷರ್‌ಗಳು, ಸ್ಪ್ರೇಯರ್ಸ್ ಮತ್ತು ಬಿಡಿಭಾಗಗಳು ಮುಂತಾದ ಸಲಕರಣೆಗಳು ಸಬ್ಸಿಡಿ ಯೋಜನೆಯಡಿ  ನೀಡಲಾಗುವುದು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.