ADVERTISEMENT

ಕುಚ್ಚೂರು ಗ್ರಾಮ ಪಂಚಾಯಿತಿ: ಅಧ್ಯಕ್ಷರ ಗೈರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:23 IST
Last Updated 8 ಜನವರಿ 2014, 6:23 IST

ಹೆಬ್ರಿ: ಕುಚ್ಚೂರು ಪಂಚಾಯಿತಿಯ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಚ್ಚೂರಿನಿಂದ ನಿರ್ಗಮಿಸುವ ವರೆಗೆ ಆಡಳಿತ ಕಾರ್ಯಕಲಾಪದಲ್ಲಿ ಭಾಗವಹಿಸುವುದಿಲ್ಲ. ಸಾಮಾಜಿಕ ಆರ್ಥಿಕ ಮತ್ತು ಜನಗಣತಿ 2011ರ ಕರಡು ಪಟ್ಟಿ ಪ್ರಕಟಣೆ ಮತ್ತು ಹಕ್ಕು ಬಾಧ್ಯತಾ ಹಾಗೂ ಆಕ್ಷೇಪಣೆ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿಯ ವಿಶೇಷ ಗ್ರಾಮಸಭೆಯನ್ನೂ ನಡೆಸುವುದಿಲ್ಲ ಎಂದು ಮಂಗಳವಾರ ನಡೆಯಬೇಕಿದ್ದ ಸಭೆಗೆ ಅಧ್ಯಕ್ಷರು ಗೈರು ಹಾಜರಾಗಿದ್ದರು.

ಈ ನಡುವೆ ಅಧ್ಯಕ್ಷರು ಸೇರಿ ಕಾಂಗ್ರೆಸ್ ಬೆಂಬಲಿತ ಐದು ಸದಸ್ಯರು ಮತ್ತು ಬಿಜೆಪಿ ಬೆಂಬಲಿತ ಒಬ್ಬ ಸದಸ್ಯ ಗೈರುಹಾಜರಾಗಿದ್ದು ಬಿಜೆಪಿ ಬೆಂಬಲಿತ ಪಂಚಾಯಿತಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ 3 ಜನ ಸದಸ್ಯರ ಉಪಸ್ಥಿತಿಯಲ್ಲಿ ಗ್ರಾಮ ಸಭೆ ನಡೆಸಲಾಗಿದೆ.

ಕಾನೂನಿನ ಪ್ರಕಾರ ಮತದಾರರ ಶೇ 10ರಷ್ಟು ಅಥವಾ 100 ಕ್ಕಿಂತ ಹೆಚ್ಚು ಗ್ರಾಮಸ್ಥರು ಕಡ್ಡಾಯವಾಗಿ ಹಾಜರಿರಬೇಕು. ಆದರೆ ಕೇವಲ 19 ಗ್ರಾಮಸ್ಥರು ಸೇರಿ ಒಟ್ಟು 34 ಜನ ಭಾಗವಹಿಸಿದ್ದರು. ಇಲಾಖೆಯ ಅಧಿಕಾರಿಗಳು, ಮಾರ್ಗದರ್ಶಿ ಅಧಿಕಾರಿಗಳು ಭಾಗವಹಿಸಿದ್ದರು.
ಪಿಡಿಒ ಜೊತೆ ಕೆಲಸ ಮಾಡಲು ಆಗುವುದಿಲ್ಲ–ಪತ್ರ: ಕುಚ್ಚೂರು ಗ್ರಾಮ ಪಂಚಾಯಿತಿಗೆ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ರಾಧಾಕೃಷ್ಣ ರಾವ್ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಇದರ ನಡುವೆಯೇ ರಾಧಾಕೃಷ್ಣ ರಾವ್ ಕುಚ್ಚೂರು ಪಂಚಾಯಿತಿಯ ಪಿಡಿಒ ಆದರೆ ನಾವು ಆಡಳಿತ ಮಾಡುವುದಿಲ್ಲ. ಅವರನ್ನು ಕುಚ್ಚೂರು ಪಂಚಾಯಿತಿ­ಯಿಂದ ಬೇರೆಡೆ ವರ್ಗಾಯಿಸಿ ಎಂದು ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮತ್ತು ಸ್ಥಳೀಯ ಪ್ರಮುಖರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪಂಚಾಯಿತಿಯ ಸದಸ್ಯರು ಮತ್ತು ಅಧ್ಯಕ್ಷರಿಗೆ ಪಿಡಿಒ ಮೇಲೆ ನಂಬಿಕೆ ಇಲ್ಲ ಬೇರೆ ಪಿಡಿಒ ನೇಮಕ ಮಾಡುವಂತೆ ಅರ್ಜಿಯಲ್ಲಿ ಹೇಳಲಾಗಿದೆ. ಕಾರ್ಕಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹ­ಣಾಧಿ­ಕಾರಿ ಚೆನ್ನಪ್ಪ ಮೊಯಿಲಿ ಅವರು ಶುಕ್ರವಾರ ಕುಚ್ಚೂರು ಪಂಚಾಯಿತಿಗೆ ಬಂದು ತನಿಖೆ ನಡೆಸಿದ್ದಾರೆ.

ಪಿಡಿಒ ಅವರು ಇದೇ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿದ್ದು ಆಡಳಿತದ ವಿರುದ್ಧ ನಡೆದುಕೊಂಡಿರುವ ಹಲವು ಪ್ರಸಂಗಗಳು ನಡೆದಿದ್ದು ಅವರ ಮೇಲೆ ನಮಗೆ ನಂಬಿಕೆ ಇಲ್ಲ. ಪಿಡಿಒ ವರ್ಗಾವಣೆಯ ವರೆಗೆ ಯಾವುದೇ ಕಲಾಪ ನಡೆಸುವುದಿಲ್ಲ. ಇಂದಿನ ಗ್ರಾಮಸಭೆಗೂ ಹಾಜರಾಗಿಲ್ಲ ಎಂದು ಪಿಡಿಒ ಬದಲಾವಣೆಗೆ ಇಒ ಮತ್ತು ಸಿಎಸ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಉತ್ತರ ದೊರಕಿಲ್ಲ ಎಂದು ಪಂಚಾಯಿತಿ ಅಧ್ಯಕ್ಷೆ ಗೀತಾ ಶ್ಯಾಮ್ ನಾಯ್ಕ್ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.