ADVERTISEMENT

ಬ್ರಹ್ಮಾವರ: ಕೃಷಿ, ಕುಡಿಯುವ ನೀರಿಗೆ ಆತಂಕ

ಬತ್ತಿದ ಮಡಿಸಾಲು ಹೊಳೆ, ಉಗ್ಗೇಲ್‌ಬೆಟ್ಟು ಕಿಂಡಿ ಅಣೆಕಟ್ಟು ಸೋರಿಕೆ

ಶೇಷಗಿರಿ ಭಟ್ಟ
Published 10 ಏಪ್ರಿಲ್ 2023, 6:04 IST
Last Updated 10 ಏಪ್ರಿಲ್ 2023, 6:04 IST
ಉಗ್ಗೇಲ್ ಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸೋರಿಕೆಯಿಂದ ನೀರಿನ ಸಂಗ್ರಹ ಕುಂಠಿತವಾಗಿದೆ
ಉಗ್ಗೇಲ್ ಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸೋರಿಕೆಯಿಂದ ನೀರಿನ ಸಂಗ್ರಹ ಕುಂಠಿತವಾಗಿದೆ   

ಬ್ರಹ್ಮಾವರ: ಉಪ್ಪೂರು, ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಗ್ಗೇಲ್‌ ಬೆಟ್ಟಿನಲ್ಲಿ ಮಡಿಸಾಲು
ಹೊಳೆಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸೋರಿಕೆ ಯಿಂದಾಗಿ ಈ ಬಾರಿ ಕೃಷಿಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ತಾಲ್ಲೂಕಿನ ವಿವಿಧೆಡೆ ಸೀತಾ ಹಾಗೂ ಮಡಿಸಾಲು ಹೊಳೆಗಳ ಅಣೆಕಟ್ಟು
ಗಳಲ್ಲಿ ನೀರಿನ ಸಂಗ್ರಹ ತೀವ್ರ ಪ್ರಮಾಣದಲ್ಲಿ ಕುಸಿದಿದೆ.

ಮಡಿಸಾಲು ಹೊಳೆಗೆ ಉಗ್ಗೇಲ್‌ ಬೆಟ್ಟುವಿನಲ್ಲಿ 2 ವರ್ಷದ ಹಿಂದಿನ ವರೆಗೆ, ಡಿಸೆಂಬರ್‌– ಜನವರಿಯಲ್ಲಿ ಮರದ ಹಲಗೆಗಳನ್ನು ಅಳವಡಿಸಿ ನೀರಿನ ಸಂಗ್ರಹ ಮಾಡುತ್ತಿದ್ದು, ಕಳೆದ ಬಾರಿಯಿಂದ ಫೈಬರ್‌ ಹಲಗೆಗಳನ್ನು ಹಾಕಿ ಉಪ್ಪು ನೀರು
ಒಳಬಾರದಂತೆ ಮತ್ತು ಸಿಹಿ ನೀರಿನ ಶೇಖರಣೆ ಮಾಡಲಾಗುತ್ತಿದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಈ ಬಾರಿ ನೀರಿನ ಸೋರಿಕೆಯಾಗಿ ಉಪ್ಪು ನೀರು ಒಳಪ್ರವೇಶಿ, ಸಿಹಿ ನೀರಿನ
ಸಂಗ್ರಹ ಗಣನೀಯವಾಗಿ ಇಳಿದಿದೆ. ಮಳೆಗಾಲಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇರುವಂತೆ ಮೊದಲೇ ನೀರಿನ ಸಂಗ್ರಹ ಕುಗ್ಗಿದ ಕಾರಣ ಆರೂರು, ಹೇರಂಜೆ, ಹಾವಂಜೆ ಪ್ರದೇಶದ ಕೃಷಿಕರಲ್ಲಿ ಆತಂಕ ಮೂಡಿದೆ. ಇನ್ನೊಂದೆಡೆ ಕುಡಿಯುವ ನೀರಿಗೂ ಹಾಹಾಕಾರ ಕೇಳಿ ಬರುವ ಪರಿಸ್ಥಿತಿ ಎದುರಾಗಿದೆ.

ಬೈಕಾಡಿಯಲ್ಲೂ ಮಡಿಸಾಲು ಹೊಳೆಗೆ ಈ ಬಾರಿ ಹೊಸದಾಗಿ
ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ, ಆದರೂ ಯಾವುದೇ ಪ್ರಯೋಜನವಾಗಿಲ್ಲ. ಫೈಬರ್‌ ಹಲಗೆ ಜೋಡಣೆಯಿಂದ ನೀರಿನ ಸೋರಿಕೆ ಮತ್ತು ಮರಳು ಗಣಿಗಾರಿಕೆಯಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದು ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಸೀತಾನದಿಯ ನಾಲ್ಕೂರು ಅರ್ಬಿ ನಂದಿಕೋಣ, ಮೀಯಾರು ದೊಣಿಕಡು, ಕೊಕ್ಕರ್ಣೆ ಸಮೀಪದ ನಿಂಜೂರುಬೆಟ್ಟು, ಮುಂಡಾಡಿ ಕಿಂಡಿ ಅಣೆಕಟ್ಟುಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕೊರತೆ ಇದೆ.
ಕೆಲವು ಸ್ಥಳಗಳಲ್ಲಿ ದೊಡ್ಡ ಗುಂಡಿಗಳಲ್ಲಿ ಮಾತ್ರವೇ ನೀರಿನ ಸಂಗ್ರಹವಿದ್ದು, ನದಿ ಒಣಗಿದಂತಾಗಿದೆ.

ಕಿಂಡಿ ಅಣೆಕಟ್ಟು ಹಲಗೆ ಅಳವಡಿಕೆ ಕಾರ್ಯವನ್ನು ಸ್ಥಳೀಯ ಫಲಾನುಭವಿ ರೈತರೇ ನಿರ್ವಹಿಸುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ನೀರು ಸಂಗ್ರಹಿಸಲು ಸಾಧ್ಯ. ಗುತ್ತಿಗೆದಾರರು ಕೆಲಸ ಮಾಡಿಸುವಾಗ ಅನುಭವ, ಆಸಕ್ತಿಯ ಕೊರತೆಯಿಂದ ಬಹುತೇಕ ಕಡೆ ವೈಫಲ್ಯ ಕಾಣುತ್ತಿದೆ. ಪ್ರಯೋಜನ ಪಡೆಯುವ ರೈತರೇ ಪಾಲ್ಗೊಳ್ಳುವ ವ್ಯವಸ್ಥೆ ಮಾಡಬೇಕೆಂಬ ಅಭಿಪ್ರಾಯವೂ ಸ್ಥಳೀಯರಿಂದ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.