ADVERTISEMENT

ಕ್ರಿಯಾಶೀಲತೆಗೆ ಹಿರಿಯ ನಾಗರಿಕರಿಗೆ ಚಟುವಟಿಕೆ ಅಗತ್ಯ: ಸಚಿವ ಪ್ರಮೋದ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 10:09 IST
Last Updated 8 ಅಕ್ಟೋಬರ್ 2017, 10:09 IST
ಉಡುಪಿ ಹಿರಿಯ ನಾಗರಿಕರ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 80 ವರ್ಷ ಪೂರೈಸಿದ ಹಿರಿಯರನ್ನು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು. ಪ್ರಜಾವಾಣಿ ಚಿತ್ರ
ಉಡುಪಿ ಹಿರಿಯ ನಾಗರಿಕರ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 80 ವರ್ಷ ಪೂರೈಸಿದ ಹಿರಿಯರನ್ನು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ವೃದ್ಧಾಪ್ಯದಲ್ಲೂ ಕ್ರಿಯಾಶೀಲ ರಾಗಿರಲು ಸಂಘದ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಕ್ರೀಡೆ ಮತ್ತು ಯುವಜನ ಜನಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು. ಉಡುಪಿ ಹಿರಿಯ ನಾಗರಿಕರ ಸಂಸ್ಥೆ ಶನಿವಾರ ಜಗನ್ನಾಥ ಸಭಾ ಭವನದಲ್ಲಿ ಆಯೋಜಿಸಿದ್ದ ‘ಚಿಗುರೆಲೆ–ಹಣ್ಣೆಲೆ’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನವಚೇತನದಿಂದ ಬಾಳಬಹುದು. ನಿಮ್ಮ ವಯಸ್ಸಿನವರೊಂದಿಗೆ ಪರಸ್ಪರ ಒಡನಾಡುವುದರಿಂದ ಮನಸ್ಸು ಹಗುರವಾಗುತ್ತದೆ. ಜೀವನವಿಡೀ ಮಕ್ಕಳಿಗಾಗಿ ದುಡಿದ ಹಿರಿಯ ಜೀವದ ಚಟುವಟಿಕೆಯನ್ನು ಮನೆಗೆ ಸಿಮೀತ ಮಾಡುವುದರಿಂದ ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

₹10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿ ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಇಲಾಖೆಯನ್ನು ಅದಕ್ಕೆ ಸ್ಥಳಾಂತರ ಮಾಡಲಾಗುವುದು. ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಅಗತ್ಯವಿರುವ ಕೊಠಡಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ADVERTISEMENT

ಹಿರಿಯ ನಾಗರಿಕರಾದ ಎನ್. ಚಂದ್ರಶೇಖರ್ ಶೇಟ್, ಬಿ.ವಿ.ಆರ್ ಮಲ್ಯ, ಡಾ. ಗೋಪಾಲಕೃಷ್ಣ ಆಚಾರ್ಯ, ಅಮ್ಮುಂಜೆ ಮಂಜುನಾಥ ನಾಯಕ್, ವೈಕುಂಠ ನಾಯಕ್, ಬಿ.ವಿ. ರವಿಕರ್ ಕಾಮತ್, ಸುಂದರ್ ಗಿರಿ ಶೆಟ್ಟಿ, ಡಾ.ಕೆ. ಸೀತಾರಾಮ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬಡಗಬೆಟ್ಟು ಕೋ. ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ನಾಗರಿಕರ ಸಂಘದ ಗೌರವಾಧ್ಯಕ್ಷ ಎ.ಪಿ ಕೊಡಂಚ, ಅಂಗವಿಲರ ಕಲ್ಯಾಣ ಇಲಾಖೆ ಅಧಿಕಾರಿ ನಿರಂಜನ್ ಭಟ್ ಇದ್ದರು. ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಸಿ.ಎಸ್.ರಾವ್ ಸ್ವಾಗತಿಸಿದರು, ಜತೆಕಾರ್ಯದರ್ಶಿ ಎ.ಎಸ್ ದೇವರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.