ADVERTISEMENT

ತೆಂಗಿನ ಗರಿಯಲ್ಲಿ ಅರಳಿದಗಣಪ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 18 ಡಿಸೆಂಬರ್ 2013, 6:32 IST
Last Updated 18 ಡಿಸೆಂಬರ್ 2013, 6:32 IST

ವಿದ್ಯಾಗಿರಿ (ಮೂಡುಬಿದಿರೆ): ಕೃಷಿ ಪರಿಕರಗಳಾದ ತೆಂಗಿನ ಗರಿ, ಬಾಳೆ ಎಲೆ, ಬಾಳೆಯ ದಂಡನ್ನು ಬಳಸಿಕೊಂಡು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಲಾಕೃತಿ, ಗಣಪನ ವಿಗ್ರಹ ಮಾತ್ರವಲ್ಲ ಕಲ್ಲಂಗಡಿಯಿಂದ ವಿವಿಧ ವ್ಯಕ್ತಿಗಳ ಭಾವಚಿತ್ರ ರಚಿಸುವ ಅಪೂರ್ವ ಕಲಾ ಪ್ರೌಢಿಮೆ  ವಿದ್ಯಾಗಿರಿ­ಯಲ್ಲಿ ಮಂಗಳವಾರ ಆರಂಭಗೊಂಡಿದೆ.

ಇದೇ 19ರಿಂದ ನಡೆಯುವ ಆಳ್ವಾಸ್‌ ವಿಶ್ವನು­ಡಿಸಿರಿ ವಿರಾಸತ್‌ ಸಂದರ್ಭ ಕನ್ನಡ ನಾಡು ನುಡಿಯ ಜತೆಗೆ ನಮ್ಮ ಶ್ರೀಮಂತ ಕಲೆಯನ್ನು ಅನಾವರಣ­ಗೊಳಿಸಲು ವಿರಾಸತ್‌ ಕಾರ್ಯಕ್ರಮ ನಡೆಯುವ ಪರಿಸರದಲ್ಲಿ ಸಕಲ ಸಿದ್ಧತೆ ನಡೆದಿದೆ. ಶಿವಮೊಗ್ಗದ ಜೆ.ಎನ್‌.ಎನ್‌.ಸಿ.ಇ ಕಾಲೇಜಿನ ಪ್ರಾದ್ಯಾಪಕ ಹರೀಶ್‌ ಕುಮಾರ್‌ ಎಂಬವರು ಪ್ರಕೃತಿದತ್ತ ಪರಿಕರಗಳನ್ನು ಬಳಸಿಕೊಂಡು ಸುಂದರವಾರದ ವಿವಿಧ ಕಲಾಕೃತಿಗಳನ್ನು ರಚಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ

 ವಿಘ್ನ ನಿವಾರಕ ಗಣಪನ ಕಲಾಕೃತಿಯನ್ನು ರಚಿಸಲು ಅವರು ಬಳಸಿಕೊಂಡ ಪರಿಕರಗಳೆಲ್ಲಾ ಕೃಷಿಗೆ ಸಂಬಂಧಿಸಿದ್ದವು.  ತೆಂಗಿನ ಗರಿಯಿಂದ ಗಣಪನ ಆಕೃತಿ ರಚಿಸಿದ್ದಾರೆ. ‘ವಿ’ ಆಕಾರದಲ್ಲಿ ಬಾಳೆ ಎಲೆಯನ್ನು ಕತ್ತರಿಸಿ ಅಂಚನ್ನು ವಿನ್ಯಾಸಗೊಳಿಸಲಾಗಿದೆ. ಈ ರೀತಿ ಸುಂದರವಾಗಿ ರೂಪುಗೊಂಡ ದೇವರ ವಿಗ್ರಹವನ್ನು ಬಾಳೆಯ ದಿಂಡಿನ ಮೇಲೆ ನಿಲ್ಲಿಸಲಾಗಿದೆ. ತನ್ನ ಸಹಾಯಕ ಬಳ್ಳಾರಿಯ ಶರಣಪ್ಪ ಜತೆಗೂಡಿ ಈ ಕಲಾಕೃತಿಯನ್ನು ರಚಿಸಲು ಅವರಿಗೆ 3 ಗಂಟೆ ಸಮಯ ಬೇಕಾಗಿದೆ. ಇದಾದ ಬಳಿಕ  ಕರಾವಳಿಯ ಗಂಡು ಕಲೆ ಎಂದೆ ಪ್ರಸಿದ್ಧಿ ಪಡೆದ ಯಕ್ಷಗಾನ ಕಲಾಕೃತಿಯನ್ನು ರಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹರೀಶ್‌ ಕುಮಾರ್‌ ಹೇಳುವಂತೆ ಜರ್ಮನ್‌ ಮತ್ತು ಥೈಲಾಂಡ್‌ನಲ್ಲಿ ಈ ಕಲೆ ಹೆಚ್ಚು ಜನಪ್ರಿಯತೆಯನ್ನು ಪಡಕೊಂಡಿದ್ದು ಅಲ್ಲಿ ಇದನ್ನು ’ಜಾನೂರು ಆರ್ಟ್‌’ ಎಂದು ಕರೆಯುತ್ತಾರೆ. ಇದೇ ಹೆಸರು ಭಾರತದಲ್ಲೂ ಪ್ರಚಲಿತವಾಗಿದೆ.

ಕಲ್ಲಂಗಡಿಯಲ್ಲಿ ಮೂಡಲಿರುವ ಭಾವಚಿತ್ರ:
ಕಲ್ಲಂಗಡಿ ಹಣ್ಣಿನಲ್ಲಿ ವಿವಿಧ ವ್ಯಕ್ತಿಗಳ ಭಾವಚಿತ್ರವನ್ನು ರಚಿಸುವಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ ಕಲಾವಿದ ಹರೀಶ್‌ ಕುಮಾರ್‌ ವಿಶ್ವ ನುಡಿಸಿರಿ ವಿರಾಸತ್‌ ಮೊದಲ ದಿನ ಕರ್ನಾಟಕದ 8 ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ತೋಟಗಾರಿಕೆ ಇಲಾಖೆಯ ಮಹಾಪಿತ ಎಂ.ಹೆಚ್‌ ಮರಿಗೌಡ, ವಿಶ್ವನುಡಿಸಿರಿ ವಿರಾಸತ್‌ನ ರೂವಾರಿ ಡಾ. ಮೋಹನ್‌ ಆಳ್ವ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರಗಳು ಕಲ್ಲಂಗಡಿಯಲ್ಲಿ ಮೂಡಿಬರಲಿವೆ. ವಿಶ್ವನುಡಿಸಿರಿ ವಿರಾಸತ್‌ ವೇಳೆ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಹರೀಶ್‌ ಕುಮಾರ್‌ ತಿಳಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.