ADVERTISEMENT

ಪಟ್ಟಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 8:40 IST
Last Updated 23 ಜನವರಿ 2012, 8:40 IST

ಕುಂದಾಪುರ: `ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಪಟ್ಟಣಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ `ಮಾಸ್ಟರ್ ಪ್ಲಾನ್~ ರೂಪಿಸಬೇಕಾದ ಅನೀರ್ವಾತೆ ಇದೆ~ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.

ಕುಂದಾಪುರದಲ್ಲಿ ಪುರಸಭೆಯ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ 2011-12ನೇ ಸಾಲಿನಲ್ಲಿ ಪರಿಶಿಷ್ಟ ಮತ್ತು ಇತರ ಜಾತಿಯ ವಿವಿಧ  ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ  ಶಿಕ್ಷಣ, ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.  ಕಳೆದ ಹತ್ತು ವರ್ಷಗಳಲ್ಲಿ ಇದರ ಪ್ರಮಾಣ ಶೇ.34ರಷ್ಟಿದ್ದರೆ ಪ್ರಸ್ತುತ ಅದು ಶೇ.39ರಷ್ಟು  ಏರಿಕೆ ಆಗಿದೆ. 

ನಗರಗಳಲ್ಲಿ ವಲಸಿಗರು ನೆಲೆಗೊಳ್ಳುವುದರಿಂದ ಕೊಳಚೆ ಪ್ರದೇಶ ಹೆಚ್ಚಾಗುವ ಹಾಗೂ ಬಡತನದ ಮಟ್ಟವೂ ಏರಿಕೆಯಾಗುವ ಅಪಾಯವಿದೆ. ಈ ಸಮಸ್ಯೆ ತಡೆಯಲು ಪಟ್ಟಣ ಹಾಗೂ ಪುರಸಭಾ ಮಟ್ಟದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಪಾಸ್ಟರ್ ಪ್ಲಾನ್‌ಗಳನ್ನು ರೂಪಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ~ ಎಂದರು.

ಪುರಸಭೆಯು 2011-12ನೇ ಸಾಲಿನಲ್ಲಿ ಪರಿಶಿಷ್ಟರು ಮತ್ತು ಇತರ ಜಾತಿ ಬಡ ಜನರ ಕಲ್ಯಾಣಕ್ಕಾಗಿ ಮೀಸಲಿರಿಸಿದ ರೂ.59.8 ಲಕ್ಷ ರೂಪಾಯಿ ಅನುದಾನದ ಫಲಾನುಭವಿಗಳಿಗೆ  ಗ್ಯಾಸ್ ಒಲೆ,  ರಾಜ್ಯ ಹಣಕಾಸು ನಿಧಿಯಲ್ಲಿ ಹೊಲಿಗೆ ಯಂತ್ರ, ವೈದ್ಯಕೀಯ ವೆಚ್ಚ, ಉಚಿತ ನಳ್ಳಿ ನೀರಿನ  ಸಂಪರ್ಕ, ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿತರಿಸಲಾಯಿತು.

ಪುರಸಭಾ ಅಧ್ಯಕ್ಷ  ಕೆ.ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ಮೂರನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ‌್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಾಣಿಗೋಪಾಲ, ಕುಂದಾಪುರ ಉಪವಿಭಾಗಾಧಿಕಾರಿ ಬಿ.ಸದಾಶಿವ ಪ್ರಭು, ಪುರಸಭಾ ಉಪಾಧ್ಯಕ್ಷೆ ಕಲಾವತಿ, ಮುಖ್ಯಾಧಿಕಾರಿ ಸದಾನಂದ, ಸ್ಥಾಯಿ ಸಮಿತಿಯ ಅಧ್ಯಕ್ಷ  ರಾಜೇಶ್ ಕಾವೇರಿ, ಸದಸ್ಯ ರವಿರಾಜ ಖಾರ್ವಿ ವಕೀಲ ರಾಘವೇಂದ್ರ ಚರಣ್  ನಾವುಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.