ADVERTISEMENT

ಪರವಾನಗಿ ನೀಡದಿರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:00 IST
Last Updated 21 ಅಕ್ಟೋಬರ್ 2011, 10:00 IST

ಎಲ್ಲೂರು (ಪಡುಬಿದ್ರಿ): ಯುಪಿಸಿಎಲ್ ವಿದ್ಯುತ್ ಸ್ಥಾವರದ ಒಂದನೇ ಘಟಕದ ಪರವಾನಗಿ ನವೀಕರಿಸಬಾರದು. ಎರಡನೇ ಘಟಕಕ್ಕೆ ಪರವಾನಗಿ ನೀಡಬಾರದು ಎಂದು ಎಲ್ಲೂರು ಗ್ರಾಮ ಪಂಚಾಯಿತಿ ಆಗ್ರಹಿಸಿದೆ.

ಎಲ್ಲೂರು ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುಮನಾ ಎಸ್. ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಈ ಬಗ್ಗೆ ಗ್ರಾ.ಪಂ. ಆಡಳಿತ ನಿರ್ಣಯ ಕೈಗೊಂಡಿದೆ. ನಿರ್ಣಯದ ಪ್ರತಿಯನ್ನು ಬೆಂಗಳೂರಿನ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರವಾನಿಸಿದೆ. 

ಯುಪಿಸಿಎಲ್‌ಗೆ ಇದುವರೆಗೂ ಗ್ರಾ.ಪಂ. ವತಿಯಿಂದ ಯಾವುದೇ ಪರವಾನಗಿ ನೀಡಿಲ್ಲ. ಆದರೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪರವಾನಿಗೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಘಟಕದಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.

ಈಗಾಗಲೇ ಅನೇಕ ಸಾವು, ನೋವು ಸಂಭವಿಸಿದೆ. ಆರೋಗ್ಯ, ಕೃಷಿ ಕುಡಿಯುವ ನೀರು, ಸುತ್ತಮುತ್ತಲಿನ ಮರಗಿಡಗಳಿಗೆ ಹಾನಿ ಉಂಟಾಗಿದ್ದು, ಇದರಿಂದಾಗಿ ಸ್ಥಳೀಯರು ಜೀವನ ನಡೆಸುವುದೇ ಕಷ್ಟವಾಗಿ ಮಾರ್ಪಟ್ಟಿದೆ.

ಕಂಪೆನಿಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಗ್ರಾ.ಪಂ ಗ್ರಾಮ ಸಭೆಯನ್ನಾಗಲೀ, ಸಾಮಾನ್ಯ ಸಭೆಯನ್ನಾಗಲೀ ನಡೆಸುವಂತಿಲ್ಲ. ಗ್ರಾಮಸ್ಥರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ಈಗ ನೀಡಿರುವ ಪರವಾನಗಿ ನವೀಕರಿಸಬಾರದು ಮತ್ತು ಮುಂದಿನ ಯಾವುದೇ ಹೊಸ ಘಟಕಕ್ಕೆ ಪರವಾನಗಿ ನೀಡಬಾರದು.

ಪಂಚಾಯಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಸ್ಥರಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು~ ಎಂದು ಸಭೆಯಲ್ಲಿ ಸರ್ವಾನುಮತದ ನಿರ್ಣಯಕೈಗೊಳ್ಳಲಾಯಿತು. ನಿರ್ಣಯ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.