ADVERTISEMENT

ಪರಿಷತ್ ಚುನಾವಣೆ: ಮತಪಟ್ಟಿಯಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 8:05 IST
Last Updated 11 ಜೂನ್ 2012, 8:05 IST

ಕುಂದಾಪುರ: ಭಾನುವಾರ ನಡೆದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೆಲವೊಂದು ಮತಗಟ್ಟೆಯಲ್ಲಿ ಮತಪಟ್ಟಿಯಲ್ಲಿ ಗೊಂದಲ ಉಂಟಾಗಿ ಕೆಲವರು ಮತದಾನ ಮಾಡದೇ ವಾಪಸ್ ಬರಬೇಕಾಯಿತು.

ಪದವೀಧರ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದ ಕೆಲವು ಮತದಾರರು ಚುನಾವಣಾ ಆಯೋಗದ ಬದಲಾದ ತೀರ್ಮಾನದಿಂದ ಮತದಾನ ಮಾಡಲು ಸಾಧ್ಯವಾಗಲಿಲ್ಲ.

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗಾಗಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ಆಯೋಗ ನಿರ್ಧರಿಸಿ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿದ್ದ ಮತದಾರರಿಗೆ ಸೂಕ್ತ ದಾಖಲೆಗಳನ್ನು ರವಾನಿಸಲು ಸೂಚನೆ ನೀಡಲಾಗಿತ್ತು. ಈ ಸೂಚನೆಯಂತೆ  ಸೂಕ್ತ ದಾಖಲೆಯನ್ನು ತಲುಪಿಸುವಂತೆ ಸಂಬಂಧಿಸಿದ ಮತದಾರಿಗೆ ಪತ್ರ ಕಳುಹಿಸುವ ವ್ಯವಸ್ಥೆಯಾಗಿದ್ದರೂ ಅದು ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಭಾನುವಾರ ಮತದಾನಕ್ಕೆ ಕೇಂದ್ರಕ್ಕೆ ತೆರಳಿದ ಮತದಾರರ ದೂರು.

ರಾಜಕೀಯ ಪಕ್ಷಗಳಿಗೆ ನೀಡಿದ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, ಅಧಿಕಾರಿಗಳ ಕೈಯಲ್ಲಿ ಇದ್ದ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರು ನಾಪತ್ತೆಯಾಗಿದ್ದರಿಂದ ಮತದಾನಕ್ಕೆ ಅವಕಾಶ ನೀಡಲಿಲ್ಲ.

ಮತದಾನ ಪಟ್ಟಿಯ ಫೈನಲ್ ಪಟ್ಟಿಯಲ್ಲಿ ಪ್ರಕಟವಾಗುವವರೆಗೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಬದಲಾಗಿರುವ ನಿಯಮ ಕುರಿತು ಮತದಾರರಿಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ ಎಂದು ಮತದಾನ ವಂಚಿತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆಯ ದಿನಾಂಕ ಪ್ರಕಟವಾದ ದಿನದಿಂದ ಇಂದಿನವರೆಗೂ ಏನಿಲ್ಲ ಎಂದರೂ ಮೂರು ಬಾರಿ ಮತದಾರ ರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗಿದೆ. ಭಾನುವಾರ ಮೊಬೈಲ್ ಸ್ವಿಚ್ ಆನ್ ಮಾಡಿದ ಮತದಾರರಿಗೆ ರಾಜಕೀಯ ಪಕ್ಷದ ಮುಖಂಡರಿಂದ `ಗುಡ್ ಮಾರ್ನಿಂಗ್~ ಆರಂಭವಾಗಿ ರುವುದು ಚುನಾವಣೆಯ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.