ಉಡುಪಿ: ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಕಾರ್ಕಳದ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಭಾನುವಾರ ಸಾಮಾನ್ಯ ಪ್ರವೇಶ ಪರೀಕ್ಷೆ– ಪರೀಕ್ಷಾ ಪ್ರಾಧಿಕಾರದ ಪೂರ್ವ ಸಮಾಲೋಚನೆ ಮತ್ತು ಮಾರ್ಗದರ್ಶನ ಶಿಬಿರ ಆಯೋಜಿಸಿತ್ತು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ. ಶ್ರೀಧರ ಆಚಾರ್ಯ ಅವರು ಶಿಬಿರಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗೃತೆ ವಹಿಸಬೇಕು. ಆಯ್ಕೆ ಪ್ರಕ್ರಿಯೆ ಬಗ್ಗೆ ಇರುವ ಎಲ್ಲ ಸಂಶಯಗಳನ್ನು ನಿವಾರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ವಾಸುದೇವ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಸಿಇಟಿ ಪ್ರವೇಶ ಪ್ರಕ್ರಿಯೆಯ ಸಮಗ್ರ ಮಾಹಿತಿ ನೀಡಿದರು. ದಾಖಲಾತಿ ಪರಿಶೀಲನೆ, ಆಯ್ಕೆ ಪ್ರಕ್ರಿಯೆ, ಶುಲ್ಕ ಪಾವತಿ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ, ಸೀಟು ನಿರಾಕರಣೆ ಮೊದಲಾದ ಹಂತಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರ ನೀಡಿದರು.
ಪಿಯುಸಿ ನಂತರ ತೆಗೆದುಕೊಳ್ಳಬಹುದಾದ ವಿವಿಧ ಕೋರ್ಸ್ಗಳು ಮತ್ತು ಆ ಮೂಲಕ ಭವಿಷ್ಯದಲ್ಲಿ ವೃತ್ತಿಪರರಾಗುವ ಅವಕಾಶಗಳ ಬಗ್ಗೆ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ರಂಜಿತ್ ಭಟ್ ಮಾಹಿತಿ ನೀಡಿದರು.
ಸಹ ಪ್ರಾಧ್ಯಾಪಕ ನಾಗರಾಜ ರಾವ್, ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಲಭ್ಯ ಇರುವ ಕೋರ್ಸ್ ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ರಮ್ಯಶ್ರೀ ಮತ್ತು ಸೌಮ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ರಾವ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.