ಶಿರ್ವ: ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಬಿಜೆಪಿ ಮತ್ತೊಮ್ಮೆ ಆಡಳಿತಕ್ಕೆ ಬರಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ತಿಳಿಸಿದ್ದಾರೆ.
ಕಟಪಾಡಿಯಲ್ಲಿ ಈಚೆಗೆ ನಡೆದ ಬಿಜೆಪಿ ಸ್ಥಾನೀಯ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಯ ಉತ್ತಮ ಆಡಳಿತಕ್ಕೆ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಸಂಪೂರ್ಣ ಗ್ರಾಮ ನೈರ್ಮಲ್ಯ ಯೋಜನೆ ಯಲ್ಲಿ ರಾಜ್ಯದಲ್ಲಿಯೇ ಉಡುಪಿ ಪ್ರಥಮದಲ್ಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುವ ಬದಲಾಗಿ 94 (ಸಿ)ಯನ್ವಯ ಬಡವರಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದೆ. ರೈತರಿಗೆ ಕುಮ್ಕಿ ಮತ್ತು ಮೂಲಗೇಣಿ ಹಕ್ಕು ನೀಡುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬಡವರಿಗೆ ನೀಡಿದ ಬಿಪಿಎಲ್ ಕಾರ್ಡನ್ನು ಹಿಂದಕ್ಕೆ ಪಡೆಯಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟಿದೆ ಎಂದು ಅವರು ಆರೋಪಿಸಿದರು.
ಕಾಪು ಪುರಸಭೆಯಾದ ಕಾರಣ ಸುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳ ಸುಮಾರು 1,500ರಷ್ಟು ಕುಟುಂಬಗಳು 94 (ಸಿ) ಅಕ್ರಮ ಸಕ್ರಮ ಮತ್ತು ಇನ್ನಿತರ ಸೌಲಭ್ಯ ಗಳಿಂದ ವಂಚಿತರಾಗುವಂತಾಗಿದೆ. ಈ ಎಲ್ಲ ವಿಷಯಗಳನ್ನು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದರು.
ಬಿಜೆಪಿ ಕಟಪಾಡಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಮಲಾಕ್ಷ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾ ಯಿತಿ ಅಭ್ಯರ್ಥಿ ಗೀತಾಂಜಲಿ ಸುವರ್ಣ, ತಾಲೂಕು ಪಂಚಾಯಿತಿ ಅಭ್ಯರ್ಥಿ ರಾಜೇ ಶ್ ಕುಮಾರ್, ಮಾಧವ ಅಂಚನ್, ಕೆ. ಮುರಳೀಧರ ಪೈ, ಸರೋಜಿನಿ ಶೆಟ್ಟಿ, ಪವಿತ್ರಾ ಶೆಟ್ಟಿ, ಕೆ. ಶ್ರೀ ನಿವಾಸ ಕಿಣಿ, ಸುಭಾಸ್ ಬಲ್ಲಾಳ್, ಚಂದ್ರಶೇಖರ ಕಾಂಚನ್ ಇದ್ದರು. ಪ್ರಧಾನ ಕಾರ್ಯ ದರ್ಶಿ ನಿತಿನ್ ಶೇರಿಗಾರ ವಂದಿಸಿದರು.
‘ಕಾಂಗ್ರೆಸ್ ಪ್ರಣಾಳಿಕೆ ಕಣ್ಣೊರೆಸುವ ತಂತ್ರ’ : ಉಡುಪಿ: ಕಾಂಗ್ರೆಸ್ ಪಕ್ಷ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕೇವಲ ಕಣ್ಣೊರೆಸುವ ತಂತ್ರ. ಚುನಾವಣೆ ಘೋಷಣೆಯಾದಾಗ ಎಚ್ಚೆತ್ತುಕೊಳ್ಳುವ ಕಾಂಗ್ರೆಸ್ಸಿಗರು ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಟ್ಟು ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಟ್ಟಾರು ರತ್ನಾಕರ ಹೆಗ್ಡೆ ಟೀಕಿಸಿದ್ದಾರೆ.
ಇಂದು ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದು ಕೇಂದ್ರ ಸರ್ಕಾರದ ನೆರವಿನಿಂದ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳನ್ನು ನಿರ್ಲಕ್ಷಿಸಿದೆ. ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಆದರೂ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ರೈತರು ಅನೇಕ ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದ ಕುಮ್ಕಿ ಭೂಮಿಯ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ದೊರಕಿಸಿಕೊಡು ವಲ್ಲಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವ ಹಾರ ನಡೆದಿದೆ. ಆದರೆ, ಸರ್ಕಾರ ಮಾತ್ರ ಇಂತಹ ದೊಡ್ಡಮಟ್ಟದ ಭ್ರಷ್ಟಾಚಾರ ಪ್ರಕರಣವನ್ನು ಇತರರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿಗರಿಗೆ ನಿಜವಾಗಿಯೂ ನೈತಿಕತೆ ಎಂಬುವುದು ಇದ್ದರೆ ತಕ್ಷಣವೇ ಈ ಯೋಜನೆಯನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.