ADVERTISEMENT

ಬೈಂದೂರಿನಲ್ಲಿ ಮರುಕಳಿಸಿದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:34 IST
Last Updated 8 ಜುಲೈ 2013, 10:34 IST

ಬೈಂದೂರು: ಬೈಂದೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಎಡೆಬಿಡದೆ ಸುರಿದ ಭಾರಿ ಮಳೆ ಹಾಗೂ ಆಗಾಗ ಬೀಸಿದ ಗಾಳಿಯ ಪರಿಣಾಮ ಇಲ್ಲಿನ ಎಲ್ಲ ನದಿಗಳಲ್ಲಿ ಪ್ರವಾಹ ಮರುಕಳಿಸಿದೆ.

ಸೌಪರ್ಣಿಕಾ ನದಿಯಲ್ಲಿ ಬೆಳಿಗ್ಗೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ನೆರೆನೀರು ಮಧ್ಯಾಹ್ನದ ಬಳಿಕ ಏರತೊ ಡಗಿತು. ನದಿ ದಡದ ಗ್ರಾಮಗಳಾದ ಹೇರೂರು, ನಾವುಂದ, ಬಡಾಕೆರೆ, ಮರವಂತೆ, ತ್ರಾಸಿ, ನಾಡ, ಹಡವು, ಸೇನಾಪುರದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಅದರೆ ನೆರೆನೀರು ಮೊನ್ನಿನ ಮಟ್ಟ ಮುಟ್ಟಿಲ್ಲವಾದ್ದರಿಂದ ತಕ್ಷಣ ಆತಂಕದ ಸ್ಥಿತಿ ಉಂಟಾಗಿಲ್ಲ. ಸಂಜೆ ಹೊತ್ತಿಗೆ ನೆರೆ ಏರಿಕೆ ಸ್ಥಗಿತ ಗೊಂಡಿತ್ತು.

ಬೈಂದೂರು ಮತ್ತು ಬಿಜೂರು ನಡುವೆ ಹರಿಯುವ ಸುಮನಾವತಿ ಹಾಗೂ ಖಂಬದಕೋಣೆ ಮತ್ತು ಕಿರಿ ಮಂಜೇಶ್ವರ ನಡುವೆ ಹರಿಯುವ ಎಡಮಾವಿನಹೊಳೆಯಲ್ಲಿ ರಭಸದ ನೆರೆ ಕಾಣಿಸಿಕೊಂಡಿತು.

ಅಕ್ಕಪಕ್ಕದ ಗದ್ದೆ, ತೋಟಗಳಿಗೆ ನೀರು ನುಗ್ಗಿತು. ತಗ್ಗು ಪ್ರದೇಶದ ಮನೆಗಳು ನೀರಿನಿಂದ ಆವೃತವಾಗಿ ಜನರು ಸಂಚಾರಕ್ಕೆ ಪರದಾಡುವಂತಾಯಿತು. ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾದ ಕಾರಣ ಕ್ರಮೇಣ ಪ್ರವಾಹ ತಗ್ಗಿತು.

ಸಂಜೆ ಹೊತ್ತಿಗೆ ಮಳೆಯ ಅಬ್ಬರ ಕಡಿಮೆಯಾಗಿದ್ದು, ರಾತ್ರಿ ನೆರೆ ಏರುವ ಸಾಧ್ಯತೆ ಕಡಿಮೆ ಎಂದು ಮರವಂತೆಯ ನದಿತೀರದ ನಿವಾಸಿಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಗ್ರೇಶನ್ ಕ್ರಾಸ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.