ಉಡುಪಿ: ‘ಚೂರಿ ಇರಿದಿರುವ ಸುದ್ದಿ ಕೇಳಿ ಆಘಾತವಾಯಿತು’ ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಅತ್ತಿಗೆ ಜಯಂತಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಭದ್ರತೆ ಇದ್ದರೂ ಇಂತಹ ಘಟನೆ ಹೇಗೆ ನಡೆಯಿತು ಎಂಬ ಪ್ರಶ್ನೆ ಕಾಡುತ್ತಿದೆ. ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸದೇ ಒಳಗೆ ಬಿಟ್ಟಿದ್ದಾರೆ. ವಿಶ್ವನಾಥ್ ಅವರು ತುಂಬಾ ತಾಳ್ಮೆ ಸ್ವಭಾವದ ವ್ಯಕ್ತಿ. ಯಾವುದೇ ವಿಷಯಕ್ಕೂ ಅವರು ಸಿಟ್ಟು ಮಾಡಿಕೊಳ್ಳುವುದಿಲ್ಲ’ ಎಂದರು.
‘ಅವರು ನ್ಯಾಯದ ಪರವಾಗಿ ಕೆಲಸ ಮಾಡುವ ವ್ಯಕ್ತಿ. ತುಂಬಾ ಧೈರ್ಯಶಾಲಿಯೂ ಹೌದು. ತಮ್ಮ ಕೆಲಸದ ವಿಷಯವನ್ನು ಬಿಟ್ಟರೆ ಬೇರೆಯದರ ಬಗ್ಗೆ ಯೋಚಿಸುವುದಿಲ್ಲ. ಇಂತಹ ಘಟನೆ ನಡೆಯಬಾರದಿತ್ತು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿ ಸ್ವಲ್ಪ ಸಮಾಧಾನವಾಗಿದೆ’ ಎಂದು ಹೇಳಿದರು.
ಜಯಂತಿ ಅವರು ವಿಶ್ವನಾಥ ಶೆಟ್ಟಿ ಅವರ ಅಣ್ಣ ಶಿವಾಜಿ ಶೆಟ್ಟಿ ಅವರ ಪತ್ನಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.