ADVERTISEMENT

`ಮುಖ್ಯಮಂತ್ರಿಯಿಂದ ದ್ವೇಷದ ರಾಜಕೀಯ'

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 9:55 IST
Last Updated 7 ಜೂನ್ 2013, 9:55 IST

ಉಜಿರೆ: ಅಗ್ಗದ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಬೆಳ್ತಂಗಡಿ ತಾಲ್ಲೂಕು ಬಿ.ಜೆ.ಪಿ ಘಟಕದ ಅಧ್ಯಕ್ಷೆ ಶಾರದಾ ಆರ್.ರೈ ಆರೋಪಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿ.ಜೆ.ಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಬೇಕೆಂದು ಸಲಹೆ ನೀಡಿದ ಅವರು ಮಠ- ಮಂದಿರಗಳ ಅನುದಾನ, ಗೋ ಹತ್ಯೆ ನಿಷೇಧ, ಸಾರಾಯಿ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯುವುದು ಸರಿಯಲ್ಲ. ರಾಜಕೀಯ ಕಾರಣದಿಂದಲೇ ರಾಜ್ಯಪಾಲರು ಬಿ.ಜೆ.ಪಿ ಸರ್ಕಾರ ಮಂಡಿಸಿದ ಈ ಮಸೂದೆಗೆ ಸಹಿ ಹಾಕಿಲ್ಲ ಎಂದು ಹೇಳಿದರು.

ಬಿ.ಜೆ.ಪಿ ನಾಯಕ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ ಗುಟ್ಕಾ ನಿಷೇಧಕ್ಕೆ ಬಿ.ಜೆ.ಪಿ ಯ ವಿರೋಧವಿಲ್ಲ. ಆದರೆ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಪ್ಯಾಕೇಜ್ ರೂಪಿಸದೇ ಅನೇಕ ವಿಷಯಗಳಲ್ಲಿ ಮುಖ್ಯಮಂತ್ರಿ ಆತುರದ ತೀರ್ಮಾನ ತೆಗೆದುಕೊಂಡು ತಪ್ಪು ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಸೋಲಿಗೆ ಆಂತರಿಕ ಗೊಂದಲವೇ ಕಾರಣವೆಂದು ಅವರು ಒಪ್ಪಿಕೊಂಡರು. ಶಾಸಕ ಕೆ.ವಸಂತ ಬಂಗೇರ ಬಿ.ಜೆ.ಪಿ ಪಕ್ಷದ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದು ಅವರ ಗೆಲುವು ಅನಗತ್ಯ ಟೀಕೆಗೆ ಪರವಾನಗಿ ಅಲ್ಲ. ಕೇವಲ ಮಾತಿನ ಮನೋರಂಜನೆಗಾಗಿ ಸುಳ್ಳು ಆರೋಪ ಹೊರಿಸುವುದನ್ನು ನಿಲ್ಲಿಸಿ ತನ್ನ ಘನತೆ, ಗೌರವ ಕಾಪಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಎಂಡೋ ಸಂತ್ರಸ್ತರಿಗೆ ಪರಿಹಾರ ಹಾಗೂ ತಾಲ್ಲೂಕು ಕಚೇರಿ ಅವ್ಯವಸ್ಥೆ ಸರಿ ಪಡಿಸುವುದರೊಂದಿಗೆ ತಾಲ್ಲೂಕಿನ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಪ್ರಗತಿಗಾಗಿ ಶ್ರಮಿಸಲಿ. ಇದಕ್ಕೆ ತಾವು ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಮತದಾರರಿಗೆ ಅಭಿನಂದನಾ ಸಭೆ:   ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ ಕಾರ್ಯಕರ್ತರು ಹಾಗೂ ಮತದಾರರ ಅಭಿನಂದನಾ ಸಭೆಯು ಇದೇ 8 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಗುರುವಾಯನಕೆರೆಯ ಹವ್ಯಕ ಭವನ `ನಮ್ಮ ಮನೆ` ಯಲ್ಲಿ ನಡೆಯಲಿದೆ.

ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್ ಮತ್ತು ಮೋನಪ್ಪ ಭಂಡಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ರಂಜನ್ ಜಿ. ಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.