ADVERTISEMENT

ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಡಿಸೆಂಬರ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:00 IST
Last Updated 11 ಅಕ್ಟೋಬರ್ 2011, 9:00 IST

ಉಡುಪಿ: `ಇದೇ ಬರುವ ಡಿಸೆಂಬರ್‌ನಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಮ್ಮಿಕೊಳ್ಳಲಾಗುವುದು~ ಎಂದು ಶಾಸಕ ರಘುಪತಿ ಭಟ್ ಇಲ್ಲಿ ತಿಳಿಸಿದರು.

ಜಿ.ಪಂ.,ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಅಜ್ಜರಕಾಡು ನೂತನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಜಿಲ್ಲೆಯ ನೂತನ ಒಳಾಂಗಣ ಕ್ರೀಡಾಂಗಣ ಸಕಲ ರೀತಿಯಲ್ಲಿಯೂ ಸಜ್ಜುಗೊಂಡಿದೆ. ಈ ಕ್ರೀಡಾಂಗಣಂದ ಒಳ್ಳೆಯ ಕ್ರೀಡಾಪಟುಗಳು ಮೂಡಿಬರಬೇಕು. ಮುಂದಿನ ದಿನಗಳಲ್ಲಿ ಬಹಳಷ್ಟು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಇಲ್ಲಿ ನಡೆಯಲಿವೆ~ಎಂದರು.

`ಇಲ್ಲಿನ ಬ್ಯಾಡ್ಮಿಂಟನ್ ತರಬೇತಿ ಶಿಬಿರದಲ್ಲಿ 31 ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಕ್ರೀಡಾಪಟುವಿಗೆ ಹಣಕಾಸಿನ ತೊಂದರೆ ಇದ್ದರೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯೇ ಸಹಾಯ ಮಾಡಲಿದೆ ಎಂದರು.

ಪಂದ್ಯಾಟಕ್ಕೆ ಚಾಲನೆ ನೀಡಿದ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, `ಸ್ವಂತ ಪ್ರತಿಭೆ ಇಲ್ಲದಿದ್ದರೆ ಕ್ರೀಡಾಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಮಕ್ಕಳು ಪರಿಶ್ರಮದೊಂದಿಗೆ ಪಾರಿತೋಷಕವನ್ನು ಪಡೆಯಲು ಕೂಡ ಪ್ರಯತ್ನಿಸಿ~ ಎಂದು ಹುರಿದುಂಬಿಸಿದರು.
ಕ್ರೀಡೆಯಲ್ಲಿ ವ್ಯಕ್ತಿತ್ವವನ್ನು ಗುರುತಿಸಿ ಪೋಷಿಸಿ ಬೆಳೆಸುವ ಕೆಲಸವನ್ನು ಪೋಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ವಿಭಾಗ ಮಟ್ಟದ ಪಂದ್ಯಾಟದಲ್ಲಿ ಉಡುಪಿ, ಮಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಿಂದ ತಂಡಗಳು ಪಾಲ್ಗೊಂಡಿವೆ. ಸಮಾರೋಪ ಸಮಾರಂಭ ಇದೇ 11ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಸದಾಶಿವ ಪ್ರಭು, ಲಯನ್ ಜಯಕರ ಶೆಟ್ಟಿ ಇಂದ್ರಾಳಿ, ಸುರೇಂದ್ರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಪ್ರಕಾಶ್ ಕೊಡವೂರು, ಎಸ್.ವಿಠಲ ಶೆಟ್ಟಿ, ಬಸವರಾಜಪ್ಪ, ವಸಂತ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.