ADVERTISEMENT

ವಾಸುದೇವ ಅಡಿಗ ಕೊಲೆ ಪ್ರಕರಣ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2013, 19:59 IST
Last Updated 18 ಜನವರಿ 2013, 19:59 IST
ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು
ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು   

ಕುಂದಾಪುರ: ಉಡುಪಿ ಜಿಲ್ಲೆಯ ವಂಡಾರಿನ ಆರ್‌ಟಿಐ ಕಾರ್ಯಕರ್ತ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡ ವಾಸುದೇವ ಅಡಿಗ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ತನಿಖಾ ತಂಡದವರು ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆ ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದೇ 7 ರಂದು ರಾತ್ರಿ ಸ್ನೇಹಿತನನ್ನು ಮನೆಯ ಸಮೀಪ ಬಿಟ್ಟು, ತಮ್ಮ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಅಡಿಗರು, 12ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಮ್ಮೆದೊಡ್ಡಿ ಕೆರೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಬಂಧಿತರನ್ನು ಬೆಂಗಳೂರು ಬನಶಂಕರಿಯ ಜಿ.ಮುರುಗೇಶ್ ಎನ್ನುವವರ ಪುತ್ರ ಉಮೇಶ (32), ಬನಶಂಕರಿ ಹೊಸಕೆರೆ ಹಳ್ಳಿಯ ಪುಷ್ಟಗಿರಿ ನಗರ ಲೇಔಟ್‌ನ ದಿ.ಚನ್ನಪ್ಪ ಎನ್ನುವವರ ಪುತ್ರ ನವೀನ್ ಸಿ (31) ಹಾಗೂ ಪದ್ಮನಾಭ ನಗರದ ಗೌಡನಪಾಳ್ಯದ ಶ್ರೀನಿವಾಸ ಮೂರ್ತಿ ಎನ್ನುವವರ ಪುತ್ರ ಕೆ.ಎಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನೂ 7 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ತನಿಖೆ ಚುರುಕು:ಆರೋಪಿಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದುಕೊಂಡಿರುವ ಜಿಲ್ಲಾ   ಎಸ್. ಪಿ ಡಾ.ಬೋರಲಿಂಗಯ್ಯಎಂ.ಬಿ, ಕುಂದಾಪುರದ ಡಿವೈಎಸ್‌ಪಿ ಯಶೋಧಾ ಸುನೀಲ್ ಒಂಟಿಗೋಡಿ, ಇನ್‌ಸ್ಪೆಕ್ಟರ್‌ಗಳಾದ ಪ್ರವೀಣ್ ನಾಯ್ಕ, ಮಾರುತಿ ನಾಯ್ಕ, ಮಂಜುನಾಥ ಕವರಿಯವರ ಮಾರ್ಗದರ್ಶನದ ಪೊಲೀಸರ ತಂಡ ಪ್ರಕರಣದ ನಿಗೂಢತೆ ಬಯಲಿಗೆಳೆಯುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.