ಬೈಂದೂರು: ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಆಪ್ತ, ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಗೋಕುಲ ಶೆಟ್ಟಿ ಅವರ ಉಪ್ಪುಂದದಲ್ಲಿರುವ ಮನೆಗೆ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಗೋಕುಲ ಶೆಟ್ಟಿ ಸೇರಿದಂತೆ ಮನೆಯವರನ್ನು ಹೊರ ಹೋಗದಂತೆ ತಡೆದು ತಪಾಸಣೆ ನಡೆಸುತ್ತಿದ್ದಾರೆ. ಸಂಜೆಯೂ ಪೊಲೀಸರ ಕಾವಲು ಪಡೆದು ತಪಾಸಣೆ ಮುಂದುವರಿಸಿದ್ದಾರೆ.
ಅಧಿಕಾರಿಗಳು ದಾಳಿಯ ಕಾರಣ ಮತ್ತು ಪತ್ತೆಯಾಗಿರುವ ಹಣಕಾಸು, ಸ್ವತ್ತುಗಳ ಕುರಿತು ಯಾರಿಗೂ ಮಾಹಿತಿ ನೀಡುತ್ತಿಲ್ಲ.
ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ಬಂಧುಗಳಿಗೆ, ಆಪ್ತರಿಗೆ ಅವರನ್ನು ಕಾಣಲು ಅಥವಾ ಸಂಪರ್ಕಿಸಲು ಅವಕಾಶ ನೀಡುತ್ತಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿರುವ ಗೋಪಾಲ ಪೂಜಾರಿ ಕೇಂದ್ರ ಸರ್ಕಾರದ ಕಾರ್ಯಸೂಚನೆಯಂತೆ ಕರ್ನಾಟಕದ ಕಾಂಗ್ರೆಸ್ ಸಚಿವರ ಮತ್ತು ನಾಯಕರ ಆಪ್ತರ ವಿರುದ್ಧ ಕೈಗೊಳ್ಳಲಾಗುತ್ತಿರುವ ರಾಜಕೀಯ ಪ್ರೇರಿತ ಕ್ರಮದ ಮುಂದುವರಿದಿದೆ. ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಹತಾಶೆಯಿಂದ ಐಟಿ ಇಲಾಖೆ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ರೀತಿ ದ್ವೇಷದ ರಾಜಕಾರಣಕ್ಕೆ ಬೈಂದೂರು ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.