ಉಡುಪಿ: ಹಳ್ಳಿ ಮತ್ತು ಗೋವುಗಳು ದೇಶದ ಸಂಸ್ಕೃತಿಯ ಅಸ್ತಿತ್ವದ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ ಇವೆರಡು ನಶಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯ ದಾ.ಮಾ ರವೀಂದ್ರ ತಿಳಿಸಿದರು.
ಪುಣ್ಯಕೋಟಿ ಗೋಸೇವಾ ಟ್ರಸ್ಟ್, ಹೇರೂರು ಶುಕ್ರವಾರ ನಗರದ ಹೆಬ್ಬಾರ್ ಕಾಂಪೌಂಡ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ನಶಿಸಿ ಹೋಗುತ್ತಿರುವ ಗೋವು ಹಾಗೂ ಹಳ್ಳಿಗಳ ಉಳಿವಿಗಾಗಿ ವ್ಯಾಪಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಬದುಕಲು ಅವಶ್ಯಕತೆಯಿರುವ ಜೀವ ಜಲ ಮತ್ತು ಆಶ್ರಯ ನೀಡುತ್ತಿರುವ ಭೂಮಿಯನ್ನು ಹೇಗೆ ತಾಯಿಯ ಸ್ವರೂಪದಲ್ಲಿ ಪೂಜಿಸುವ ನಮಗೆ ಗೋವು ಕೂಡ ಮಾತೆಯ ಸಮಾನ. ಜನ್ಮಕೊಟ್ಟ ತಾಯಿ ಎರಡು ವರುಷಗಳ ಕಾಲ ಹಾಲ ನೀಡುತ್ತಾಳೆ. ಆದರೆ ಗೋಮಾತೆ ಜೀವನಪರ್ಯಂತ ಹಾಲು ಕೊಡುವ ನಿಸ್ವಾರ್ಥ ಜೀವಿಯಾಗಿದ್ದಾಳೆ ಎಂದರು.
ಸೋಮಶೇಖರ್ ಭಟ್ ಅವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೋಪೂಜೆಗೆ ಚಾಲನೆ ನೀಡಿದರು. ಬಳಿಕ ಸುಮಾರು ನೂರಕ್ಕೂ ಅಧಿಕ ಸಾರ್ವಜನಿಕರು ವೈಯುಕ್ತಿಕವಾಗಿ ಗೋಪೂಜೆ ಮಾಡಿದರು.
ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ.ವಸಂತ್ ಭಟ್, ಉದ್ಯಮಿ ಪ್ರವೀಣ್ ಶೇಟ್ ರವರು ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಗೆ ದೇಣಿಗೆಗಳನ್ನು ನೀಡಿದರು. ಉಡುಪಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪದುಬೆಟ್ಟು,ಅಂಬಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ದಯಶಿನಿ ಪಂದುಬೆಟ್ಟು, ಮಟ್ಟು ಲಕ್ಷ್ಮೀನಾರಾಯಣ, ಮಂಗಳೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಶಂಭು ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಜನಿ ಹೆಬ್ಬಾರ್, ಹೆರ್ಗ ಶಕ್ತಿ ಕೇಂದ್ರ ಅಧ್ಯಕ್ಷ ಸುಬ್ರಮಣ್ಯ ಪೈ, ಉಪಸ್ಥಿತರಿದ್ದರು. ಅಮಿತಾ ಪ್ರಾರ್ಥಿಸಿದರು. ಕೊಡವೂರು ಮಂಜುನಾಥ್ ಭಟ್ ರವರು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.