ADVERTISEMENT

ಸಮಸ್ಯೆಗಳ ಆಧಾರದ ಮೇಲೆ ಜೆಡಿಎಸ್ ಮತಯಾಚನೆ: ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 11:07 IST
Last Updated 23 ಮಾರ್ಚ್ 2014, 11:07 IST

ನರಸಿಂಹರಾಜಪುರ: ಪ್ರಸ್ತುತ ನಡೆ­ಯುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮಲೆನಾಡಿನ ಭಾಗದ­ಒತ್ತುವರಿ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರಗಳನ್ನು ಆಧಾರವಾಗಿಟ್ಟು ಕೊಂಡು ಮತ ಯಾಚನೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್  ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ಒತ್ತುವರಿ ಸಮಸ್ಯೆ ಉದ್ಭವಿಸಲು ಹಾಗೂ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಬಿಜೆಪಿ ಕಾರಣವಾದರೆ, ಅಡಿಕೆ ಬೆಳೆಗಾರರ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಮಲೆನಾಡಿನ ಸಮಸ್ಯೆ ಉದ್ಭವವಾಗಲು ಕಾರಣವಾಗಿರುವುದರಿಂದ ಈ ಎರಡು ಪಕ್ಷಗಳಿಗೂ ಮತ ಕೇಳುವ ಹಕ್ಕಿಲ್ಲ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಈ ಬಾರಿ ತೃತೀಯ ರಂಗ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ತೃತೀಯ ರಂಗ ಅಧಿಕಾರಕ್ಕೆ ಬಂದರೆ ಒಂದು ವರ್ಷದೊಳಗೆ ಅರಣ್ಯ ಹಕ್ಕು ಕಾಯಿದೆ ಹಾಗೂ ಗೋರಖ್ ಸಿಂಗ್ ವರದಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಪಕ್ಷಕ್ಕೆ ಆನೆಬಲ: ಧನಂಜಯ­ಕುಮಾರ್ ಪಕ್ಷದ ಅಭ್ಯರ್ಥಿಯಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ನಾಲ್ಕುಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಹಾಗೂ ಒಮ್ಮೆ ಶಾಸಕರಾಗಿ ಅಪಾರ ಅನುಭವಹೊಂದಿದ್ದಾರೆ.

ದೆಹಲಿಯ ರಾಜಕೀಯದ ಆಗು­ಹೋಗುಗಳ ಬಗ್ಗೆ ಜೆಡಿಎಸ್ ಅಭ್ಯರ್ಥಿಗೆ ಸಂಪೂರ್ಣ ಅರಿವಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ದೆಹಲಿ ರಾಜಕೀಯದ ಅನುಭವಿಲ್ಲ ಎಂದರು.

ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್ ಪ್ರಾಮಾಣಿಕ ರಾಜ­ಕಾರಣಿ ಎಂಬ ಹೆಸರು ಪಡೆದಿ­ದ್ದಾರೆ. ಹಿಂದೆ ಕಾಫಿ ಬೆಳೆಗಾರರಿಗೆ ಕಾಫಿ ಪ್ಯಾಕೇಜ್ ಜಾರಿಯಾಗಲು ಧನಂಜಯ­ಕುಮಾರ್ ಕಾರಣರಾ ಗಿದ್ದಾರೆಂದರು.

ಇದೇ 25ರಂದು ಕೊಪ್ಪದಲ್ಲಿ ಜೆಡಿಎಸ್ ಕ್ಷೇತ್ರ ಮಟ್ಟದ ಕಾರ್ಯ­ಕರ್ತರ ಸಭೆ ಹಮ್ಮಿಕೊಂಡಿದ್ದು ಪಕ್ಷದ ಅಭ್ಯರ್ಥಿ ಧನಂಜಯಕುಮಾರ್ ಭಾಗ­ವಹಿಸ­ಲಿದ್ದಾರೆ. ಪಕ್ಷದ ಮುಖಂ­ಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಹೊಸೂರು ಸುರೇಶ್, ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಿ.ಅಬ್ದುಲ್ ಸುಬಾನ್, ಸದಸ್ಯ ಸುನಿಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.