ADVERTISEMENT

ಸಿಂಧಗಿ ಧ್ವಜ ಹಾರಾಟ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 6:40 IST
Last Updated 13 ಜನವರಿ 2012, 6:40 IST

ಉಡುಪಿ: `ವಿಜಾಪುರದ ಸಿಂಧಗಿಯಲ್ಲಿ ತಹಸೀಲ್ದಾರ್ ಕಚೇರಿಯ ಎದುರು ಪಾಕಿಸ್ತಾನ ಧ್ವಜವನ್ನು ಹಾರಿಸುವ ಮೂಲಕ ರಾಜ್ಯದಲ್ಲಿ ಕೋಮುಗಲಭೆ ಉಂಟುಮಾಡಿ ರಾಜಕೀಯ ಲಾಭಪಡೆಯುವ ಯತ್ನ ನಡೆದಿದೆ~ ಎಂದು ಆರೋಪಿಸಿ  ಉಡುಪಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಬಿಜೆಪಿ ಹಾಗೂ ಸಂಘಪರಿವಾರಗಳ ವಿರುದ್ಧ ನಗರದ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ  ಬ್ಲಾಕ್ ಕಾಂಗ್ರೆಸ್‌ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್, `ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.

ಪಾಕಿಸ್ತಾನ ಧ್ವಜವನ್ನು ಹಾರಿಸಿ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿ ರಾಜಕೀಯ ಲಾಭ ಪಡೆಯುವ ಸಂಚನ್ನು ಪೋಲಿಸರು ಬಯಲು ಮಾಡಿದ್ದಾರೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ನಡೆಸಿ ಇದಕ್ಕೆ ಕಾರಣಕರ್ತರಾದ ಸಂಘಟನೆಯನ್ನು ನೀಷೇಧಿಸಬೇಕು~ ಎಂದು  ಅವರು ಆಗ್ರಹಿಸಿದರು.

ಯುವ ಕಾಂಗ್ರೇಸ್ ಜಿಲ್ಲಾ ಘಟಕದ ಅಮೃತ್ ಶೆಣೈ ಮಾತನಾಡಿ, `ರಾಜ್ಯ ಸರ್ಕಾರ ಹಲವು ವಿಷಯದಲ್ಲಿ ವೈಫಲ್ಯ ಕಾಣುತ್ತಿದೆ. ಕರ್ನಾಟಕ ಗುಜರಾತ್ ಆಗಲು ಸಾಧ್ಯವಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯಂತಹವರಿಂದ ಅಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲದಂತಾಗಿದೆ~ ಎಂದು ದೂರಿದರು.

`ಭಯೋತ್ಪಾದನೆಯನ್ನು ಹತ್ತಿಕ್ಕುವ ಬದಲು ಸಂಘಪರಿವಾರದ ಅಂಗ ಸಂಸ್ಥೆಗಳ ಕಾರ್ಯಕರ್ತರೇ ರಾಜ್ಯದಾದ್ಯಂತ ಕೋಮುಸೌಹಾರ್ದ ಕೆದಕುತ್ತಿದ್ದಾರೆ. ಹುಬ್ಬಳ್ಳಿ, ಸಿಂಧಗಿ, ದತ್ತಪೀಠ, ಮುಂತಾದ ಕಡೆಗಳಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ. ಯುವಕರಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ನಂಬಿಕೆ, ಗೌರವ ಕಲ್ಪಿಸುವ ಬದಲು ಅವುಗಳ ಮೇಲೆ ಬಿಜೆಪಿ ನಾಯಕರು ಟೀಕಾ ಪ್ರಹಾರ ಮಾಡುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್ ಕರ್ಕೇರ, ನರೇಶ್ ಕಾಮತ್, ಉಡುಪಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವೆರೊನಿಕಾ ಕರ್ನೆಲಿಯೊ, ಜಿ.ಪಂ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ನಿತ್ಯಾನಂದ ಕೆಮ್ಮಣ್ಣು, ಹರೀಶ್ ಕಿಣಿ, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.