ಉಡುಪಿ: ಯಕ್ಷಗಾನ ಧಾರ್ಮಿಕ ಸ್ಪರ್ಶ, ಭಾಷಾ ಸೌಂದರ್ಯ ಹಾಗೂ ಭಾರತೀಯ ಸಂಸ್ಕೃತಿ ಬಿಂಬಿಸುವ ಜೀವನ ಮೌಲ್ಯಗಳನ್ನು ಹೊಂದಿದೆ ಎಂದು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ ವಿಜಯ ಬಲ್ಲಾಳ್ ತಿಳಿಸಿದರು.
ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಇತ್ತೀಚಿಗೆ ಆಯೋಜಿಸಿದ್ದ ಯಕ್ಷಗಾನ ನೃತ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ದೇಹ ಮತ್ತು ಮನಸ್ಸುಗಳಿಗೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ. ಈ ಕಲೆಯನ್ನು ರೂಢಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ, ಸಭಾ ಕಂಪನ ದೂರವಾಗುತ್ತದೆ. ಜೀವನ ಮೌಲ್ಯದ ಸುಧಾರಣೆ ಸಾಧ್ಯ ಎಂದರು.
ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಪ್ರತಿಭಾ ಪ್ರದರ್ಶನಗಳಿಗೆ ಅವಕಾಶ ಒದಗಿ ಬಂದಾಗ ನಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಬೇಕು.ಯಕ್ಷಗಾನ ಉಳಿಸಿ ಬೆಳಸುವಲ್ಲಿ ಮಕ್ಕಳ ಪಾತ್ರ ಮಹತ್ತರವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಯಕ್ಷಗಾನ ಕಲೆ ತರಗತಿಗಳಿಗೆ ಸೇರಿಸುವಂತಾಗಬೇಕು ಎಂದರು.
ಅಂಬಲಪಾಡಿ ಯಕ್ಷಗಾನ ಕಲಾಮಂಡಳಿ ಉಪಾಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಕೆ.ಜೆ. ಕೃಷ್ಣ, ಸದಸ್ಯ ಕೆ.ಜೆ ಗಣೇಶ್ ಇದ್ದರು. ಅಧ್ಯಕ್ಷ ಮುರಳಿ ಕಡೆಕಾರ್ ಸ್ವಾಗತಿಸಿದರು, ನಟರಾಜ್ ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.