ಕಾರ್ಕಳ: ಹಿಂದೂ ಸಮಾಜ ಅಖಂಡವಾದುದು. ಹಿಂದೂ ಸಮಾಜದ ಒಗ್ಗಟ್ಟನ್ನು ಇಚ್ಛಾ ಶಕ್ತಿಯನ್ನು ಕ್ಷುಲ್ಲಕ ಶಕ್ತಿಗಳು ಹಾಳು ಮಾಡಲು ಸಾಧ್ಯವಿಲ್ಲ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ನ. 24, 25 ಮತ್ತು 26ರಂದು ನಡೆಯಲಿರುವ ಧರ್ಮ ಸಂಸದ್ ಸಮಾವೇಶದ ಪೂರ್ವಭಾವಿಯಾಗಿ ಭಾನುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಆಶ್ರಯದಲ್ಲಿ ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿ, ಇಂದು ದೇಶವನ್ನು ಹಿಂದೂ ಸಮಾಜಕ್ಕೆ ಶಕ್ತಿ ನೀಡುತ್ತಿರುವ ಸರ್ಕಾರಗಳು ಆಳುತ್ತಿವೆ.
ಈ ದೇಶದ ಅಸಂಖ್ಯಾತ ಹಿಂದೂಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರ್ಮ ಸಂಸದ್ ರಾಮ ಮಂದಿರ ನಿರ್ಮಾಣವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಹಿಂದೂಗಳಲ್ಲಿ ಹುಮ್ಮಸ್ಸನ್ನು ಹೆಚ್ಚಿಸಲಿದೆ. ರಾಮನ ಕುರಿತು, ಹಿಂದೂ ಸಮಾಜದ ಕುರಿತು ಕೆಲ ಚಿತ್ರನಟರು, ಸಮಾಜ ವಿರೋಧಿಗಳು ಕೆಟ್ಟ ಮಾತನಾಡಿರುವುದು ಸರಿಯಲ್ಲ ಎಂದರು.
ಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಮಾತನಾಡಿ, ಇಂದು ದೇಶದಲ್ಲಿ ಸಮಾರು 25 ಸಾವಿರಕ್ಕಿಂತಲೂ ಅಧಿಕ ಬಜರಂಗದಳ ಕಾರ್ಯಕರ್ತರಿದ್ದಾರೆ. ಬಜರಂಗದಳ ಹಿಂದೂ ಸಮಾಜದ ಏಳಿಗೆಗೆ ಎಂದೆಂದಿಗೂ ಶ್ರಮಿಸಲಿದೆ. ಹಿಂದೂ ವಿರೋಧಿಗಳು ಹಿಂದುತ್ವವನ್ನೇ ನಾಶ ಮಾಡುವ ಹುನ್ನಾರ ನಡೆಸಿದ್ದಾರೆ. ಆದರೆ ಹಿಂದೂಗಳು ಒಗ್ಗಟ್ಟಾಗಿದ್ದಾರೆ. ಶಿವಾಜಿಯಂತಹ ಸೈನ್ಯ ನಮ್ಮದು. ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ಈ ಒಗ್ಗಟ್ಟನ್ನು ಸಾರಲಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುವ ದಿನಗಳು ಹತ್ತಿರಾಗುತ್ತಿದೆ. ತಾಲ್ಲೂಕಿನಲ್ಲಿ ಪ್ರತಿ ಮನೆಯಿಂದಲೂ ಒಬ್ಬೊಬ್ಬ ಸದಸ್ಯ ಸಂಸದ್ನಲ್ಲಿ ಪಾಲ್ಗೊಳ್ಳಬೇಕು. ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಸಂಸದ್ಗೆ ಸಂಬಂಧಪಟ್ಟ ಚಟುವಟಿಕೆಗಳು ಇನ್ನಷ್ಟು ಆಗಬೇಕಾಗಿವೆ ಎಂದರು.
ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್ ಸಮಾವೇಶದ ರೂಪುರೇಷೆ ಕುರಿತು ತಿಳಿಸಿದರು. ಪರಿಷತ್ನ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಮಣಿಯಾಣಿ, ಗೋರಕ್ಷಾ ಪ್ರಮುಖ್ ಸುಧೀರ್ ನಿಟ್ಟೆ, ದಿನೇಶ್ ಹೆಬ್ರಿ, ಬಜರಂಗದಳ ತಾಲ್ಲೂಕು ಕಾರ್ಯದರ್ಶಿ ರಘುನಾಥ ಶೆಟ್ಟಿ, ಬಜರಂಗಳದಳದ ಸುನೀಲ್ ಕೆ.ಆರ್., ಮಾತೃಮಂಡಳಿಯ ರೇಖಾ ಡಿ. ಉಪಸ್ಥಿತರಿದ್ದರು. ಬಜರಂಗದಳ ತಾಲ್ಲೂಕು ಸಂಚಾಲಕ ಮಹೇಶ್ ಬಲೂರು ಸ್ವಾಗತಿಸಿದರು. ಪರಿಷತ್ನ ಕಾರ್ಕಳ ನಗರಾಧ್ಯಕ್ಷ ರವೀಂದ್ರ ಮೊಯಿಲಿ ವಂದಿಸಿದರು. ಸಂಗೀತಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.