ADVERTISEMENT

‘ಜನಪರ ಕಾರ್ಯ-–ಕಾಂಗ್ರೆಸ್‌ಗೆ ಶ್ರೀರಕ್ಷೆ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 11:14 IST
Last Updated 21 ಮಾರ್ಚ್ 2014, 11:14 IST

ತರೀಕೆರೆ (ಲಿಂಗದಹಳ್ಳಿ): ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಾಧನೆ­ಗಳು ಮತ್ತು ಜನೋಪಯೋಗಿ ಯೋಜನೆಗಳನ್ನು ಭಾರತ ನಿರ್ಮಾಣ ಯಾತ್ರೆಯ ಮೂಲಕ ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ತಿಳಿಸಿದರು.

ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮ­ದಲ್ಲಿ ಮಂಗಳವಾರ ನಡೆದ ಭಾರತ ನಿರ್ಮಾಣ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದ ಆಹಾರ ಭದ್ರತೆ ಮಸೂದೆ, ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಅನುಕೂಲಮಾಡಿಕೊಟ್ಟಿದೆ. ಈ ಹಿಂದೆ ಬ್ಯಾಂಕ್ ಗಳ ರಾಷ್ಟ್ರೀಕರಣದೊಂದಿಗೆ ಸಾಮಾನ್ಯರು ಬ್ಯಾಂಕ್ ಬಳಿ ಹೋಗುವ ವ್ಯವಸ್ಥೆಗೆ ಕಾರಣವಾಗಿದ್ದು ಕಾಂಗ್ರೆಸ್ ಪಕ್ಷ ಎಂದರು.

ರಾಜ್ಯದಲ್ಲಿ ಆಡಳಿತಕ್ಕೆ ಬಂದ ದಿನವೇ ಅನ್ನಭಾಗ್ಯ ಯೋಜನೆ, ರೈತರ ಸಾಲ ಮನ್ನಾ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಾಲ ಮನ್ನಾ ಯೋಜನೆ ಜಾರಿಗೆ ತಂದದ್ದು ಕಾಂಗ್ರೆಸ್. ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾ­ಗಿದೆ. ಮಹಿಳೆಯರಿಗಾಗಿ ದೇಶದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆಗೆ ಚಾಲನೆ ದೊರೆತಿದೆ ಎಂದರು.

ಹಾಲಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಕೇವಲ 22 ತಿಂಗಳ ಅವಧಿಯಲ್ಲಿ 250 ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರದ ಪ್ರಗತಿಗೆ ನಾಂದಿ ಹಾಡಿದ್ದಾರೆ. ಈ ಬಾರಿಯು ಅವರನ್ನು ಪುನರಾಯ್ಕೆ ಮಾಡುವ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಎಲ್ಲರೂ ಸಹಕರಿಸುವಂತೆ ಕರೆ ನೀಡಿದರು.

ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಆಲದ ಮರ ಇದ್ದಂತೆ. ಇದನ್ನು ಅಲುಗಾಡಿಸಲು ನೂರು ಮೋದಿ ಹುಟ್ಟಿ ಬಂದರೂ ಸಾಧ್ಯವಿಲ್ಲ. ಗುಜರಾತ್ ನ ನರಮೇದಕ್ಕೆ ಕಾರಣರಾದವರು ಭಾರತದ ಪ್ರಧಾನಿ ಆದರೆ ಸಾಮಾನ್ಯ ಜನತೆಯ ರಕ್ಷಣೆಯ ಗತಿ ಏನು ಎಂದು ಪ್ರಶ್ನಿಸಿದರು. ಮೋದಿ ಮೋಡಿ ಎಂಬುದೊಂದು ಭ್ರಮೆ . ಈ ಚುನಾವಣೆ ಬಿಜೆಪಿಗೆ ತಕ್ಕ ಪಾಠವಾಗಲಿದೆ ಎಂದರು.

ರಾಜ್ಯ ಕಿಸಾನ್ ಸಭಾ ಉಪಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಹಿಂದುಳಿದ ವರ್ಗದ ವೀರಪ್ಪಮೊಯ್ಲಿ, ಬಂಗಾರಪ್ಪ, ಸಿದ್ರಾಮಯ್ಯ , ಧರಂಸಿಂಗ್ ಇವರನ್ನು ಮುಖ್ಯಮಂತ್ರಿಯನ್ನಾಗಿ ಅಧಿಕಾರದ ಗದ್ದುಗೆಗೆ ಏರಿಸಿದ್ದು ಇದೇ ಕಾಂಗ್ರೆಸ್ ಅದರಂತೆ ಕೇಂದ್ರದಲ್ಲಿ  ಕೆಳ ವರ್ಗದ  ಮತ್ತು ಅಲ್ಪ ಸಂಖ್ಯಾತ ವರ್ಗದ ಮೀರಾಕುಮಾರಿ, ಗುಲಾಬ್ ನಬಿ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಜಾರ್ಜ್ ಫರ್ನಾಂಡಿಸ್ ಇವರಿಗೆ ಉನ್ನತ ಹುದ್ದೆ ನೀಡಿದ್ದು ಇದೇ ಕಾಂಗ್ರೆಸ್, ಯಾವುದೇ ಜಾತಿ,ಮತ, ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ಸಮನಾಗಿ ಕಂಡು ರಾಷ್ಟ್ರದ ಅಖಂಡತೆ ಮತ್ತು ಐಕ್ಯತೆ ಗಾಗಿ ಕಳೆದ ಅರವತ್ತು ವರ್ಷಗಳಿಂದ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡುವ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವಂತೆ ಕೋರಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಂ.ಮಹೇಶ್, ಮುಖಂಡರಾದ ಎಲ್.ಎಂ. ಶ್ರೀನಿ­ವಾಸ್, ಕೆ.ಆರ್. ಯೋಗೀಶ್, ಶೇಖ­ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ, ಧ್ರುವಕುಮಾರ್, ಮಂಜಣ್ಣ, ಕೆ.ಪಿ.ಕುಮಾರ್, ದೋರ­ನಾಳ್ ಪರಮೇಶ್, ಶಿವಣ್ಣ, ಐಸಮ್ಮ, ಶಾಂತವೀರಪ್ಪ, ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.