ಕಾರ್ಕಳ: ನಿಯಮಿತ ಅಧ್ಯಯನದಿಂದ ಉತ್ತಮ ಅಂಕ ಗಳಿಕೆ ಸಾಧ್ಯ ಎಂದು ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶ್ರೀವರ್ಮ ಅಜ್ರಿ ತಿಳಿಸಿದರು.
ತಾಲ್ಲೂಕಿನ ನಿಟ್ಟೆ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅಂಕಗಳಿಕೆ ಮಾತ್ರವಿದ್ದರೂ ಸಾಕಾಗುವುದಿಲ್ಲ. ಅಂಕಗಳಿಕೆಯ ಜೊತೆ ಜ್ಞಾನವೂ ಅಗತ್ಯವಾಗಿರುತ್ತದೆ. ಅದರೊಂದಿಗೆ ಕೌಶಲ್ಯವೂ ಅಗತ್ಯ. ಈ ಕೌಶಲ್ಯವನ್ನು ಆಗಾಗ ಪರಿಷ್ಕರಿಸಿಕೊಳ್ಳಬೇಕು. ಕೌಶಲ್ಯದ ಜೊತೆ ಬಿಕ್ಕಟ್ಟು ನಿರ್ವಹಣೆಯ ಕುರಿತೂ ತಿಳಿದಿರಬೇಕಾಗುತ್ತದೆ.
ತಮ್ಮ ತಮ್ಮ ಅನುಭವಗಳ ಆಧಾರದಲ್ಲಿ ಬಿಕ್ಕಟ್ಟು ನಿರ್ವಹಣೆ ಸಾಧ್ಯ, ಇದು ಸಾಮಾಣ್ಯ ವ್ಯಕ್ತಿಗಳೂ ರೂಢಿಸಿಕೊಳ್ಳಬಹುದಾದ ಸಂಗತಿ. ಇತ್ತೀಚಿನ ದಿನಗಳಲ್ಲಿ ನಡತೆ ಪರಿಷ್ಕರಣೆಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಅನುತ್ತೀರ್ಣರಾದಾಗ ನಿರಾಶರಾಗಬೇಕಾಗಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಹಸ್ತಪ್ರತಿ ‘ಸ್ಪಂದನ’ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.
ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಡಿಸಿಲ್ವ ಶುಭಾಶಂಸನೆ ನೆರವೇರಿಸದರು. ಪ್ರಾಂಶುಪಾಲರಾದ ಇಂದಿರಾ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಉಪನ್ಯಾಸಕ ಸುರೇಶ್ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಪ್ನಾ ಸ್ಪಂದನದ ಕುರಿತು ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಆಚಾರ್ಯ, ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಪ್ರೇಮ್ ಜಾನ್ಸನ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.