ADVERTISEMENT

‘ಯಕ್ಷಗಾನ ಬಹು ಕಲೆಗಳ ಸಮ್ಮಿಲನ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:26 IST
Last Updated 2 ಡಿಸೆಂಬರ್ 2013, 8:26 IST

ಉಡುಪಿ: ‘ಯಕ್ಷಗಾನ ಬಹು ಕಲೆಗಳ ಸಮ್ಮಿಲನ, ಪುರಾಣ ವ್ಯಕ್ತಿಗಳ ಪರಿಚಯ ಮತ್ತು ಭಾರತೀಯ ಸಂಸ್ಕೃತಿ ತಿಳಿಸಿಕೊಡುವ ಯಕ್ಷಗಾನದಿಂದ ಬಹುಮುಖ ವ್ಯಕ್ತಿತ್ವವನ್ನು ರೂಪಿಸಬಹುದು’ ಎಂದು ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣ ಮಠ ಪರ್ಯಾಯ ಸೋದೆ ವಾದಿ­ರಾಜ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ಸಂಯುಕ್ತವಾಗಿ ರಾಜಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ  ಕಿಶೋರ ಯಕ್ಷಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಇಂದು ಪುಸ್ತಕದ ಪಾಠಕ್ಕೆ ಒತ್ತು ನೀಡುವ ಮೂಲಕ ಪಠ್ಯೇತರ ಚಟುವಟಿಕೆಗಳಲ್ಲಿ  ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿ­ಗಳಿಗೆ ಯಕ್ಷಗಾನ ಶಿಕ್ಷಣ ನೀಡಿ ಯಕ್ಷಗಾನ ಕಲೆಯನ್ನು ಉಳಿಸುವಲ್ಲಿ ಯಕ್ಷಗಾನ ಕಲಾರಂಗ ಉತ್ತಮ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

‘ಸೂರ್ಯ–ಚಂದ್ರ ಇರುವವರೆಗೆ ಯಕ್ಷಗಾನ ಉಳಿಯಬೇಕು ಎಂಬ ದೃಷ್ಟಿಯಲ್ಲಿ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಿ ಕಲಾವಿದರನ್ನು ರೂಪಿಸು­ವುದರ ಜೊತೆಗೆ ಕಲೆಯನ್ನು ಬೆಳೆಸುವ ಕೆಲಸವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್‌, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್‌ ರಾವ್‌, ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಎಚ್‌. ಕೃಷ್ಣ ಭಟ್‌, ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಶಿಕ್ಷಣ ಟ್ರಸ್ಟ್‌ನ ವಿಶ್ವಸ್ಥ ನಂದಕುಮಾರ್‌ ಉಪಸ್ಥಿತರಿದ್ದರು.

ಸತೀಶ್ ಕೆದ್ಲಾಯ ಪ್ರಾರ್ಥಿಸಿದರು. ಎಸ್‌.ವಿ.­ಭಟ್‌ ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಕಾರ್ಯ­ದರ್ಶಿ ಮುರಲಿ ಕಡೇಕಾರ್‌ ಕಾರ್ಯ­ಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಕಡಿಯಾಳಿಯ ಯು.ಕಮಲಾ ಬಾಯಿ ಪ್ರೌಢಶಾಲೆ ವಿದ್ಯಾರ್ಥಿ­ಗಳಿಂದ ‘ಗಂಗಾ ಶಾಪ’ ಹಾಗೂ ಉಡುಪಿ ಎಸ್‌.ಎಂ.ಎಸ್‌.ಪಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ‘ಭೀಷ್ಮೋತ್ಪತ್ತಿ’ ಯಕ್ಷಗಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.