ADVERTISEMENT

‘ಯುವ ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಅಗತ್ಯ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:21 IST
Last Updated 10 ಡಿಸೆಂಬರ್ 2013, 9:21 IST

ಬ್ರಹ್ಮಾವರ: ಸ್ವ-ಉದ್ಯಮ ಪ್ರಾರಂಭಿಸಿ, ನಡೆಸಿಕೊಂಡು ಹೋಗಲು ಯುವ ಉದ್ಯಮಿಗಳಿಗೆ ಆತ್ಮವಿಶ್ವಾಸ ಅತ್ಯಗತ್ಯ ಎಂದು ಸಿಂಡಿಕೇಟ್ ಬ್ಯಾಂಕ್‌ ಕೇಂದ್ರ ಕಚೇರಿಯ ಮಹಾ ಪ್ರಬಂಧಕ ಕೆ.ಟಿ.ರೈ ಹೇಳಿದರು.

ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಯಲ್ಲಿ ೩೦ ದಿನ ನಡೆದ ವಿವಿಧ ಮೊಬೈಲ್‌ಗಳ ದುರಸ್ತಿ ತರಬೇತಿಯ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾ­ಡಿದರು. ಮಾನವನಿಗೆ ಸ್ವಾಭಿಮಾನ ಮುಖ್ಯ. ಸ್ವ ಉದ್ಯೋಗ ಕೈಗೊಂಡು ಸ್ವಾಭಿಮಾನಿಯಾಗಿ ಬದುಕುವುದು, ಸ್ವಾವಲಂಬಿ ಜೀವನದ ಮುಖ್ಯ ಹಂತ. ಇದರಿಂದ ಸಂತೋಷದ ಜೀವನ ಸಿಗುತ್ತದೆ. ಸ್ವ-ಉದ್ಯಮ ಪ್ರಾರಂಭಿಸಿ ಸ್ವಾವಲಂಬಿ ಬದುಕು ನಡೆಸಬಹುದು ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ವಿಜಯಕುಮಾರ್ ಡಿ. ನೇರ್ಲೆಕರ್ ಮಾತನಾಡಿ ಸಂಸ್ಥೆಯಲ್ಲಿ ಕಲಿತು ಸಂಪೂರ್ಣ ಜ್ಞಾನವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು. ಯುವಜನರು ಜವಾಬ್ದಾರಿ ಅರಿತು ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂದು ಅವರು ಹೇಳಿದರು.

ಸಿಂಡಿಕೇಟ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಜೋಶಿ, ಗೌರವ ಉಪನ್ಯಾಸಕ ಸಂದೀಪ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಧ್ಯಾಪಕ ಬಸವರಾಜ ಸ್ವಾಗತಿಸಿ ವಂದಿಸಿದರು. ತರಬೇತಿಯಲ್ಲಿ ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ೨೨ ನಿರುದ್ಯೋಗಿ ಯುವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.