ADVERTISEMENT

₹1.5 ಕೋಟಿ ಆದಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 6:45 IST
Last Updated 12 ಡಿಸೆಂಬರ್ 2017, 6:45 IST
ಕಾಪು ಪುರಸಭೆಯಲ್ಲಿ ಸೋಮವಾರ ನಡೆದ 2018-19 ರ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿದರು.
ಕಾಪು ಪುರಸಭೆಯಲ್ಲಿ ಸೋಮವಾರ ನಡೆದ 2018-19 ರ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿದರು.   

ಪಡುಬಿದ್ರಿ: ಮಾರ್ಚ್‌ ಅಂತ್ಯಕ್ಕೆ ಕಾಪು ಪುರಸಭೆಯ ಆದಾಯ ಸುಮಾರು ₹ 1.5 ಕೋಟಿ ಸಂಗ್ರಹವಾಗಲಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು. ಕಾಪು ಪುರಸಭೆಯಲ್ಲಿ ಸೋಮವಾರ ನಡೆದ 2018-19 ರ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ₹ 94 ಲಕ್ಷ ಸಂಗ್ರಹವಾಗಿದೆ ಎಂದರು.

ನಗರೋತ್ಥಾನದ ಕಾಮಗಾರಿಗಳು ಅನುಷ್ಠಾನಗೊಂಡಿರುವ ಕಾರಣ ಮುಂದಿನ ವರ್ಷದಲ್ಲಿ ಎಸ್.ಎಫ್‌.ಸಿ. ಅನುದಾನವನ್ನು ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದಿಲ್ಲ. ಇತರ ಹಿಂದುಳಿದ ವರ್ಗಗಳ ಫಲಾನುಭವಿಗಳು ಮನೆ ದುರಸ್ತಿಗೆ ಬೇಡಿಕೆ ಸಲ್ಲಿಸಿದರೂ ಪುರಸಭೆಯ ಯಾವುದೇ ಯೋಜನೆ ಯಲ್ಲಿ ಅನುದಾನದ ಲಭ್ಯವಿಲ್ಲದೆ ನೀಡ ಲಾಗುತ್ತಿಲ್ಲ. ಅದಕ್ಕಾಗಿ ವಾರ್ಡಿಗೆ ಒಂದು ಮನೆ ದುರಸ್ತಿಗೆ ₹ 70 ಸಾವಿರದಂತೆ ಸುಮಾರು ₹ 16 ಲಕ್ಷ ಅನುದಾನ ಹೊಂದಾಣಿಕೆಯಾಗಬೇಕಿದೆ ಎಂದರು.

ಜಲಸಂರಕ್ಷಣೆಗಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಜನಾರ್ದನ ದೇವಸ್ಥಾನದ ಬಳಿ ಇರುವ ತೋಡಿನ ಹೂಳೆತ್ತಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ವ್ಯರ್ಥವಾಗಿ ಹರಿಯುವ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಸಲಹೆ ನೀಡಿದರು.

ADVERTISEMENT

ಹೊಸ ರಸ್ತೆಗಳ ನಿರ್ಮಾಣ ಸಮೀಕ್ಷೆಗಾಗಿ ಅನುದಾನ ಕಾಯ್ದಿರಿಸಬೇಕು. ಉಪ್ಪು ನೀರು ತಡೆಗಟ್ಟು ನಿರ್ಮಾಣಕ್ಕೆ ತುರ್ತು ಗಮನ ಹರಿಸಬೇಕು ಎಂದು ಸದಸ್ಯರಾದ ಕಿರಣ್ ಆಳ್ವ ಹಾಗೂ ಅನಿಲ್ ಆಗ್ರಹಿಸಿದರು.

ಬೀದಿ ನಾಯಿಗಳ ಹಾವಳಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಅರುಣ್ ಶೆಟ್ಟಿ ಪಾದೂರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ರಾಯಪ್ಪ, ಯಾರಾದರೂ ಪುರಸಭೆ ವ್ಯಾಪ್ತಿಯಲ್ಲಿ ಅರ್ಧ ಎಕರೆ ಜಮೀನು ಒದಗಿಸಿಕೊಟ್ಟಲ್ಲಿ, ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆಯಲ್ಲಿ ಲಭಿಸುವ ವಿದ್ಯಾರ್ಥಿ ವೇತನದ ಬಗ್ಗೆ ಸಮಗ್ರ ಮಾಹಿತಿ, ಕೊಪ್ಪಲಂಗಡಿ ಮಲ್ಲಾರ್ ರಸ್ತೆ ಫೇವರ್ ಪಿನಿಶ್ ಡಾಮರೀಕರಣ ವಿಷಯಗಳ ಬಗ್ಗೆ ಸಾರ್ವಜನಿಕರು ಅಹವಾಲು ಮಂಡಿಸಿದರು. ಪುರಸಭೆ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.