ADVERTISEMENT

ಅದ್ಧೂರಿ ಸ್ವಾಗತಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 6:19 IST
Last Updated 2 ಜನವರಿ 2018, 6:19 IST

ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರ ಪುರಪ್ರವೇಶ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಪರ್ಯಾಯ ಪೂರ್ವಭಾವಿ ತೀರ್ಥ ಕ್ಷೇತ್ರಗಳ ಯಾತ್ರೆಯಲ್ಲಿ ನಿರತರಾಗಿರುವ ಸ್ವಾಮೀಜಿ ಅವರು ಇದೇ 3ರಂದು ಪುರಪ್ರವೇಶ ಮಾಡುವರು. ಆ ನಂತರ ಪರ್ಯಾಯ ಪೀಠಾರೋಹಣದ ಸಿದ್ಧತೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ.

ನಗರ ಪ್ರವೇಶಿಸುವ ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಹಾಗೂ ಭವ್ಯ ಮೆರವಣಿಗೆ ಮೂಲಕ ಅವರನ್ನು ಕರೆತರಲು ಸ್ವಾಗತ ಸಮಿತಿ ತೀರ್ಮಾನಿಸಿದೆ. ಹಲವು ಸಭೆಗಳನ್ನು ನಡೆಸಿ ಚರ್ಚಿಸಿ ಕೈಗೊಂಡಿರುವ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

3ರಂದು ಮಧ್ಯಾಹ್ನ 3.30ಕ್ಕೆ ಸರಿಯಾಗಿ ಸ್ವಾಮೀಜಿ ಅವರು ಉಡುಪಿಗೆ ಆಗಮಿಸುವರು. ನಗರದ ಜೋಡುಗಟ್ಟೆಯಲ್ಲಿ ಅವರಿಗೆ ಸ್ವಾಗತ ಕೋರಲಾಗುತ್ತದೆ. ಅಲ್ಲಿಂದ ಮಠದವರೆಗೆ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ಸುಮಾರು 75 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ನಡೆಯಲಿದ್ದು, ಸಾವಿರಾರು ಮಂದಿ ವೀಕ್ಷಿಸುವ ನಿರೀಕ್ಷೆ ಇದೆ.

ADVERTISEMENT

ಭಾವಿ ಪರ್ಯಾಯ ಮಠಾಧೀಶರಿಗೆ ಪೌರ ಸನ್ಮಾನ ಮಾಡುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ರಥಬೀದಿಯ ವೇದಿಕೆಯಲ್ಲಿ ನಗರದ ನಾಗರಿಕರ ಪರವಾಗಿ ಹಾಗೂ ಸ್ಥಳೀಯ ಆಡಳಿತ ಪರವಾಗಿ ಸನ್ಮಾನ ಮಾಡಲಾಗುತ್ತದೆ. ಹಾಲಿ ಪರ್ಯಾಯ ಪೀಠಾಧೀಶ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.