ADVERTISEMENT

ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

ಇಂದಿಗೂ ನಡೆಯುತ್ತದೆ ವಿಶೇಷ ಪೂಜೆ

ತೃಪ್ತಿ .ಎಲ್‌ ಪೂಜಾರಿ
Published 18 ಜನವರಿ 2018, 12:36 IST
Last Updated 18 ಜನವರಿ 2018, 12:36 IST
ಪಲಿಮಾರು ಮಠದ ಗ್ರಂಥ ಭಂಡಾರ
ಪಲಿಮಾರು ಮಠದ ಗ್ರಂಥ ಭಂಡಾರ   

ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪಲಿಮಾರು ಮಠದ ಗ್ರಂಥ ಭಂಡಾರದಲ್ಲಿ 800 ವರ್ಷ ಪ್ರಾಚೀನವಾದ ಮಧ್ವಾಚಾರ್ಯರ ಅತ್ಯಂತ ಅಮೂಲ್ಯವಾದ ಗ್ರಂಥಗಳು ಇವೆ.

16 ವರ್ಷಗಳಿಗೊಮ್ಮೆ ಬರುವ ಪಲಿಮಾರು ಪರ್ಯಾಯದ ಅವಧಿಯಲ್ಲಿ ಸರ್ವಜ್ಞ ಪೀಠದಲ್ಲಿ ಗ್ರಂಥಗಳನ್ನು ಇಡಲಾಗುತ್ತದೆ. ಈ ಪುಸ್ತಕದ ಪೆಟ್ಟಿಗೆಯನ್ನು ಪರ್ಯಾಯ ಅವಧಿ ಮುಗಿದನಂತರ ಪಲಿಮಾರು ಮಠದಲ್ಲಿ ಭದ್ರವಾಗಿ ಇಡಲಾಗುತ್ತದೆ. ಗ್ರಂಥಗಳಿಗೆ ಆದರದೇ ಆದ ವಿಶೇಷತೆ ಇದೆ. ಮಧ್ವಾಚಾರ್ಯರು ಸ್ವತಃ ತಮ್ಮ ಪ್ರೀತಿಯ ಶಿಷ್ಯ ಹೃಷಿಕೇಶ ಸ್ವಾಮೀಜಿಯ ಕೈಯಿಂದ ಹೇಳಿ ತಾಳೆಗರಿಯಲ್ಲಿ ಬರೆಸಿದ ಗ್ರಂಥಗಳಾಗಿವೆ.

ಗ್ರಂಥಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿಲ್ಲ. ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ ಅವರ ಸಹಾಯದಿಂದ ಡಿಜಿಟಲೀಕರಣವನ್ನೂ ಮಾಡಲಾಗಿದೆ. ಈ ಪುಸ್ತಕದಲ್ಲಿ ನಮ್ಮ ದಿನ ನಿತ್ಯ ಬದುಕು, ಆಯುರ್ವೇದ, ಜ್ಯೋತಿಷ, ವೇದಾಂತ, ಗೀತೆ, ಇತಿಹಾಸ ಸೇರಿದಂತೆ 37 ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಇವೆ.

ADVERTISEMENT

‘ಇಷ್ಟು ಪ್ರಾಚೀನ ಗ್ರಂಥಗಳು ಕಾಣ ಸಿಗುವುದು ಬಹಳ ವಿರಳ. ಏಕೆಂದರೆ ತಾಳೆಗರಿಯ ಗ್ರಂಥಗಳನ್ನು ಸಂರಕ್ಷಿಸುವುದು ಸಾಮಾನ್ಯ ವಿಷಯವಲ್ಲ. ಅದಕ್ಕಾಗಿಯೇ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ತತ್ವ ಸಂಶೋಧನ ಪೀಠವನ್ನು ನಿರ್ಮಸಿದ್ದಾರೆ. ಈ ಮೂಲಕ 120ಕ್ಕೂ ಹೆಚ್ಚಿನ ತಾಳೆ ಗರಿ ಪುಸಕ್ತಗಳನ್ನು ರಕ್ಷಿಸಲಾಗಿದೆ’ ಎನ್ನುತ್ತಾರೆ ಗ್ರಂಥಾಲಯದ ನಿರ್ದೇಶಕ ಡಾ.ವಂಶಿಕೃಷ್ಣ ಆಚಾರ್ಯ.

‘ದೇಶದ ವಿವಿಧ ಮೂಲೆಗಳಲ್ಲಿ ಸಾಕಷ್ಟು ಅಮೂಲ್ಯ ಗ್ರಂಥಗಳು ಸರಿಯಾದ ಸಂರಕ್ಷಣೆ ಇಲ್ಲದೆ ನಾಶವಾಗಿವೆ. ಆದರೆ, ಪಲಿಮಾರು ಸ್ವಾಮೀಜಿಗಳ ಗ್ರಂಥದ ಮೇಲಿನ ಪ್ರೀತಿಯಿಂದಾಗಿ ಇಲ್ಲಿ ಅವು ಉಳಿದಿವೆ. ಅವುಗಳನ್ನು ಸಂರಕ್ಷಿಸಲು ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಅವರು ಹೇಳುತ್ತಾರೆ.

ಮಧ್ವಾಚಾರ್ಯರ ಎಲ್ಲಾ ಗ್ರಂಥಗಳನ್ನು ತುಳು ಲಿಪಿಯನ್ನು ಬಳಸಿಕೊಂಡು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಅಂದಿನ ಕಾಲ
ದಲ್ಲಿಯೇ ತುಳುವಿಗೂ ಲಿಪಿ ಇದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇದು ನೋಡಲು ಮಲಯಾಳ ಅಕ್ಷರವನ್ನು ಹೋಲುತ್ತದೆ ಎನ್ನುತ್ತಾರೆ ಅವರು.
***
ಪಲಿಮಾರು ಮಠದಲ್ಲಿ ಕೇವಲ ಮಧ್ವಚಾರ್ಯರ ಪುಸಕ್ತಗಳು ಮಾತ್ರವಲ್ಲದೆ, 800ವರ್ಷಗಳ ಹಿಂದೆ ನೀಡಿದ ಹನುಮಂತನ ವಿಗ್ರಹ ಕೂಡ ಸುರಕ್ಷಿತವಾಗಿ ಇಡಲಾಗಿದೆ.
ಡಾ. ವಂಶಿ ಕೃಷ್ಣ ಆಚಾರ್ಯ,ಗ್ರಂಥಾಲಯ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.