ADVERTISEMENT

ಸಿದ್ದಾಪುರ: ದಶಕಗಳ ಹಡಿಲು ಭೂಮಿಗೆ ಹಸಿರು ಭಾಗ್ಯ

ಬೆಳ್ವೆ ಕೊಂಜಾಡಿ ಅಬ್ಬಿಮನೆಯ ಕೃಷಿ ಯಶೋಗಾಥೆ

ಸಂದೇಶ್ ಶೆಟ್ಟಿ ಆರ್ಡಿ
Published 26 ಜೂನ್ 2021, 4:18 IST
Last Updated 26 ಜೂನ್ 2021, 4:18 IST
ಉಳುಮೆ ಮಾಡಲು ಸಿದ್ಧವಾಗಿರುವ ಹಡಿಲು ಭೂಮಿ
ಉಳುಮೆ ಮಾಡಲು ಸಿದ್ಧವಾಗಿರುವ ಹಡಿಲು ಭೂಮಿ   

ಸಿದ್ದಾಪುರ: ಎರಡು ದಶಕಗಳಿಂದ ಹಡಿಲು ಬಿದ್ದ ನೀರಾವರಿ ಹೊಂದಿರುವ ಕೃಷಿಭೂಮಿ ಸಾಗುವಳಿಯಿಂದಾಗಿ ಮತ್ತೆ ಹಸುರಾಗಲಿದೆ.

ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಬಾಡಿ ಆರ್ಡಿ ಕೊಂಜಾಡಿ ಅಬ್ಬಿಮನೆ ದಿ. ವನಜಾ ಶೆಡ್ತಿ ಅವರಿಗೆ ಸೇರಿದ್ದ ಕೃಷಿಭೂಮಿ ಬಹಳ ವರ್ಷಗಳಿಂದ ಹಡಿಲು ಬಿದ್ದಿತ್ತು. ಮೂರು ದಶಕಗಳ ಹಿಂದೆ ಈ ಭಾಗದಲ್ಲಿ ಅಬ್ಬಿಮನೆಯವರದು ಅಧಿಕ ಕೃಷಿಭೂಮಿ ಹೊಂದಿರುವ ಕುಟುಂಬವಾಗಿತ್ತು. ಬೇಸಿಗೆಯ ಕೊನೆಯ ಮೂರು ತಿಂಗಳು ನೀರಿನ ಕೊರತೆ ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಪ್ರದೇಶವಾಗಿದ್ದು, ಹಿಂಗಾರು-ಮುಂಗಾರು ಬೆಳೆಯಿಂದ ಈ ಪ್ರದೇಶ ಹಚ್ಚಹಸುರಿನಿಂದ ಕಂಗೊಳಿಸುತ್ತಿತ್ತು.

ಕೃಷಿಗೆ ಅಧಿಕ ವೆಚ್ಚ, ಕೃಷಿ ಕೂಲಿಯಾಳುಗಳ ಕೊರತೆ, ಕಾಡುಪ್ರಾಣಿ ಹಾವಳಿ ಇನ್ನಿತರ ಕಾರಣಗಳಿಂದ ಕಾಲಕ್ರಮೇಣ ಈ ಕೃಷಿಭೂಮಿ ಹಡಿಲು ಬಿದ್ದು, ದನ–ಕರುಗಳಿಗೆ ಗೋಮಾಳವಾಗಿತ್ತು.

ADVERTISEMENT

ಉದ್ಯೋಗಕ್ಕಾಗಿ ನಗರಕ್ಕೆ ಹೋದವರು ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಈಗ ಹಳ್ಳಿ ಸೇರಿದ್ದಾರೆ. ಹಡಿಲು ಬಿದ್ದಿರುವ ಗದ್ದೆಯನ್ನು ಮತ್ತೆ ಹಸಿರಾಗಿಸಲು ಪ್ರಯತ್ನಿಸಿದ್ದಾರೆ. ಕೂಲಿಯಾಳುಗಳು, ಆತ್ಮೀಯರ ಜೊತೆಗೂಡಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

ಹಡಿಲು ಬಿದ್ದು ಗದ್ದೆಯ ಬದು(ಕಂಟ) ಕುಸಿದು ಸಮತಟ್ಟಾಗಿತ್ತು. ಅದನ್ನು ಸರಿಪಡಿಸಿಕೊಂಡು, ಮುಚ್ಚಿಹೋಗಿರುವ ನೀರಿನ ತೋಡು ಸರಿಪಡಿಸಿದ್ದಾರೆ. ಕೋಣ ಹಾಗೂ ಎತ್ತುಗಳ ಹೆಜ್ಜೆಯೊಂದಿಗೆ ಸಾಗುವಳಿ ಆಗುತ್ತಿದ್ದ ಗದ್ದೆಯಲ್ಲಿ ಟ್ರ್ಯಾಕ್ಟರ್ ಲಗ್ಗೆಯಿಟ್ಟಿದೆ. ಆಳುಗಳೊಂದಿಗೆ ನಾಟಿ ನಡೆಯುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರ ಯಂತ್ರಶ್ರೀ ಯೋಜನೆ ಗದ್ದೆಗಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.