ADVERTISEMENT

ಅದಮಾರು ಪರ್ಯಾಯ: ಸಜ್ಜಾದ ಕೃಷ್ಣನೂರು

ಸಿಂಗಾರಗೊಂಡ ಉಡುಪಿ ನಗರ, ಹರಿದುಬರುತ್ತಿದೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 9:43 IST
Last Updated 17 ಜನವರಿ 2020, 9:43 IST
ಅದಮಾರು ಪರ್ಯಾಯಕ್ಕೆ ಕಂಗೊಳಿಸುತ್ತಿರುವ ಕೃಷ್ಣಮಠ
ಅದಮಾರು ಪರ್ಯಾಯಕ್ಕೆ ಕಂಗೊಳಿಸುತ್ತಿರುವ ಕೃಷ್ಣಮಠ   

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಹಾಗೂ ಶಾಸಕರೂ ಆದ ರಘುಪತಿ ಭಟ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯದ ದಿನಜೋಡುಕಟ್ಟೆಯಿಂದ ಆರಂಭವಾಗುವ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಜಾನಪದ ತಂಡಗಳು ಭಾಗವಹಿಸಲಿವೆ ಎಂದರು.

ಪರ್ಯಾಯ ಮೆರವಣಿಗೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು,ಬಿರುದಾವಳಿ, ಜಾನಪದ ತಂಡಗಳು, ವೇದಘೋಷ ತಂಡ, ಲಕ್ಷ್ಮೀ ಶೋಭಾನೆ ತಂಡಗಳ ನಂತರ ಪರ್ಯಾಯ ಪೀಠ ಅಲಂಕರಿಸುವ ಸ್ವಾಮೀಜಿ ಹಾಗೂ ಇತರ ಯತಿಗಳು ಶಿಷ್ಟಾಚಾರದ ಪ್ರಕಾರಮೇನೆಯಲ್ಲಿ ಆಗಮಿಸಲಿದ್ದಾರೆ.

ADVERTISEMENT

ಯತಿಗಳ ಹಿಂದೆ, ಸ್ತಬ್ಧಚಿತ್ರಗಳು,ವಾಹನಗಳು ಸಾಗಿ ಬರಲಿವೆ. ಶ್ರೀಗಳ ಮೇನೆ ಹೊರುವ ಜವಾಬ್ದಾರಿಯನ್ನು ಜಿಲ್ಲಾ ಬ್ರಾಹ್ಮಣ ಸಂಘಕ್ಕೆ ವಹಿಸಲಾಗಿದೆ ಎಂದರು.

ನಗರಸಭೆಯಿಂದ ಸ್ವಚ್ಛತೆಯ ಕುರಿತು ಜಾಗೃತಿ, ಕೃಷಿ ಇಲಾಖೆಯಿಂದ ಕೃಷಿಯ ಮಾಹಿತಿ, ಪ್ರವಾಸೋದ್ಯಮ
ಇಲಾಖೆಯಿಂದ ತುಳುನಾಡಿನ ವಿಶೇಷ, ಜಿಲ್ಲಾ ಪಂಚಾಯಿತಿಯಿಂದ ವಿಶೇಷ ಭಜನಾ ತಂಡಗಳ ಟ್ಯಾಬ್ಲೋಗಳು ಭಾಗವಹಿಸಲಿವೆ.

ಇದರ ಜತೆಗೆ,ಪೂರ್ಣಕುಂಭ ಸ್ವಾಗತ ಕೋರುವ ತಂಡ, 4 ಗೊಂಬೆ ತಂಡಗಳು, 7 ಚೆಂಡೆಬಳಗ, 1 ಪಂಚವಾದ್ಯ ತಂಡ, 20 ಜನರ ಕೊಂಬುವಾದನ ತಂಡ, ನಾಗಸ್ವರ, ಸ್ಯಾಕ್ಸೋಫೋನ್, ಚೆಂಡೆ ಮತ್ತು ಕೋಲಾಟ,ತಮಟೆ ಮತ್ತು ನಗಾರಿ, ಮರಕಾಲು ಕಿಣಿತ, ಸೇವಾದಳ, ಹರೇರಾಮ ಹರೇಕೃಷ್ಣ,
ಬಣ್ಣದ ಕೊಡೆ, ಮಲ್ಲಕಂಬ ತಂಡಗಳು ಮೆರವಣಿಗೆಯಲ್ಲಿ ಸೊಬಗನ್ನು ಹೆಚ್ಚಿಸಲಿವೆ ಎಂದರು.

ನಗರದ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಹಾಕಲಾಗಿದೆ. ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರದ ವಿವಿಧೆಡೆ ಇ-ಶೌಚಾಲಯಗಳವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸೇವಾ ಬಳಗದ ಗೋವಿಂದರಾಜ್, ಪ್ರದೀಪ್ ರಾವ್, ಸುಬ್ರಹ್ಮಣ್ಯ ಮಾರ್ಪಳ್ಳಿ, ಸಂತೋಷ್,
ಚೈತನ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.