ಪಡುಬಿದ್ರಿ: ಅದಾನಿ ಪವರ್ ಲಿಮಿಟೆಡ್ - ಉಡುಪಿ ಟಿಪಿಪಿಯ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಷನ್ ಮೂಲಕ ಬೆಳಪು ಗ್ರಾಮದ ಪಣಿಯೂರಿನಿಂದ ಪಡುಬಿದ್ರಿ ರೈಲು ನಿಲ್ದಾಣದವರೆಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯ ಉದ್ಘಾಟನೆ, ಎರಡನೇ ಹಂತದ ಕಾಮಗಾರಿಯ ಶಿಲಾನ್ಯಾಸ ಶನಿವಾರ ನೆರವೇರಿತು.
ರೈಲು ನಿಲ್ದಾಣದವರೆಗೆ ಪ್ರಥಮ ಹಂತದ ₹ 20 ಲಕ್ಷ ವೆಚ್ಚದ, 416 ಮೀ. ಉದ್ದದ ಕಾಂಕ್ರೀಟ್ ರಸ್ತೆಯ ಉದ್ಘಾಟನೆ, ಎರಡನೇ ಹಂತದ ಸುಮಾರು ₹ 20 ಲಕ್ಷ ವೆಚ್ಚದಲ್ಲಿ 580 ಮೀ ಉದ್ದದ ರಸ್ತೆಯ ವಿಸ್ತರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.
ಬೆಳಪು ಗ್ರಾಮವು ಈಗ ಮಾದರಿ ಗ್ರಾಮವಾಗಿ ಪರಿವರ್ತನೆಗೊಂಡಿದೆ. ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೂ ಸುಮಾರು ₹ 2 ಕೋಟಿ ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳನ್ನು ಪೂರೈಸಲಾಗಿದೆ ಎಂದು ಕಿಶೋರ್ ಆಳ್ವ ಹೇಳಿದರು.
ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ದುರಸ್ತಿ ಮಾಡುವಂತೆ ರೈಲ್ವೆ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಅವರು ಸ್ಪಂದಿಸಿರಲಿಲ್ಲ. ಅದಾನಿ ಸಿಎಸ್ಆರ್ನ ವಾರ್ಷಿಕ ಕ್ರಿಯಾಯೋಜನೆಗೆ ಸೇರಿಸಿ ಅದಾನಿ ಫೌಂಡೇಷನ್ ಮೂಲಕ ಕಾಮಗಾರಿ ನಡೆಸಲಾಗಿದೆ ಎಂದರು.
ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಶರತ್ ಕುಮಾರ್, ಸುಲೈಮಾನ್, ನಫೀಸಾ, ಪ್ರಮುಖರಾದ ಕರುಣಾಕರ ಶೆಟ್ಟಿ, ಯು.ಸಿ.ಶೇಖಬ್ಬ, ಅದಾನಿ ಪವರ್ ಲಿಮಿಟೆಡ್ನ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್.ಜೇರೆ, ಫೌಂಡೇಷನ್ನ ಅನುದೀಪ್, ಸ್ಥಳೀಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.