ಪಡುಬಿದ್ರಿ: ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ.ಜಗನ್ನಾಥ ಶೆಟ್ಟಿ ಅವರ ಗದ್ದೆಯಲ್ಲಿ ಅದಮಾರಿನ ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುದರಂಗಡಿ ಸೇಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ನೋಟ- ಕೃಷಿ ಪಾಠ ಕಾರ್ಯಕ್ರಮ ಆಯೋಜಿಸಲಾಯಿತು.
ಕೆಸರುಗದ್ದೆಯಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಶಿಕ್ಷಕ ವೈ.ಎಸ್ ಸುದರ್ಶನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ಮಾತನಾಡಿ, ಮಕ್ಕಳಿಗೆ ಕೃಷಿ ಪಾಠ ನೀಡುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ. ಸುಡು ಬಿಸಿಲಿನಿಂದ ಬೆಂದ ಭೂಮಿಗೆ ಮಳೆ ನೀರು ಬಿದ್ದಾಗ ಸೂಸುವ ಸುವಾಸನೆಯನ್ನು ಗ್ರಹಿಸಿದಾಗ ಮಾತ್ರ ಭೂಮಿಯ ಮಹತ್ವ ತಿಳಿಯುತ್ತದೆ. ಅದು ಕೃಷಿಕರನ್ನು ಪುಳಕಿತಗೊಳ್ಳುವಂತೆ ಮಾಡುತ್ತದೆ ಎಂದರು.
ಸೇಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುನೀತಾ ಡಿಸೋಜ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂಥ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿ ಆದರ್ಶ ಯುವಕ ಮಂಡಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.
ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸಲು 11 ವರ್ಷಗಳಿಂದ ಗದ್ದೆ ನೋಟ ಕೃಷಿ ಪಾಠ ಕಾರ್ಯಕ್ರಮವನ್ನು ಆಯೋಜಿಲಾಗುತ್ತಿದೆ ಎಂದು ಸಂಘಟಕರು ತಿಳಿಸಿದರು.
ಆದರ್ಶ ಯುವಕ ಸಂಘದ ಕಾರ್ಯದರ್ಶಿ ಗಣೇಶ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಅಂಚನ್, ಆದರ್ಶ ಯುವತಿ ಮಂಡಲದ ಅಧ್ಯಕ್ಷೆ ಸುಜಾತಾ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.