ADVERTISEMENT

ಸಾಂಸ್ಕೃತಿಕ ಏಕತೆಯಿಂದ ಭವ್ಯ ಭಾರತ: ತಹಶೀಲ್ದಾರ್‌ ರಾಜಶೇಖರ ಮೂರ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:49 IST
Last Updated 16 ಅಕ್ಟೋಬರ್ 2021, 11:49 IST
ಬ್ರಹ್ಮಾವರದಲ್ಲಿ ನಡೆದ ನಾಡಹಬ್ಬದಲ್ಲಿ ನಿವೃತ್ತ ಶಿಕ್ಷಕ ಅಲ್ಫೋನ್ಸ್ ಡಿಸೋಜ ಮತ್ತು ಯಕ್ಷಗಾನ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್ ಹಂದಾಡಿ ಅವರನ್ನು ಸನ್ಮಾನಿಸಲಾಯಿತು. ರಾಜಶೇಖರ ಮೂರ್ತಿ, ನಿತ್ಯಾನಂದ ಶೆಟ್ಟಿ, ಮೋಹನ್ ಉಡುಪ, ಪ್ರಭಾಮಣಿ ಇದ್ದರು.
ಬ್ರಹ್ಮಾವರದಲ್ಲಿ ನಡೆದ ನಾಡಹಬ್ಬದಲ್ಲಿ ನಿವೃತ್ತ ಶಿಕ್ಷಕ ಅಲ್ಫೋನ್ಸ್ ಡಿಸೋಜ ಮತ್ತು ಯಕ್ಷಗಾನ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್ ಹಂದಾಡಿ ಅವರನ್ನು ಸನ್ಮಾನಿಸಲಾಯಿತು. ರಾಜಶೇಖರ ಮೂರ್ತಿ, ನಿತ್ಯಾನಂದ ಶೆಟ್ಟಿ, ಮೋಹನ್ ಉಡುಪ, ಪ್ರಭಾಮಣಿ ಇದ್ದರು.   

ಬ್ರಹ್ಮಾವರ: ಪ್ರತಿಯೊಬ್ಬರಲ್ಲೂ ಸಾಂಸ್ಕೃತಿಕ ಏಕತೆ, ಮೈತ್ರಿ, ಪ್ರೀತಿ ಮತ್ತು ಸೋದರತೆಯ ಭಾವನೆ ಬೆಳೆದಲ್ಲಿ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ತಹಶೀಲ್ದಾರ್‌ ರಾಜಶೇಖರ ಮೂರ್ತಿ ಹೇಳಿದರು.

ಅಜಪುರ ಕರ್ನಾಟಕದ ಸಂಘದ ವತಿಯಿಂದ ಇಲ್ಲಿನ ಉನ್ನತಿ ಸಭಾಭವನದಲ್ಲಿ ಶುಕ್ರವಾರ ನಡೆದ 66ನೇ ವರ್ಷದ ನಾಡಹಬ್ಬದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿಂದೆ ಮಾನವೀಯ ಸಂಬಂಧಗಳು ಹೆಚ್ಚಿದ್ದವು. ಆದರೆ, ಇಂದು ವಿದ್ಯುನ್ಮಾನ ಮಾಧ್ಯಮದಿಂದ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಓದುವ ಹವ್ಯಾಸವೂ ದೂರವಾಗಿದೆ. ಅಜ್ಜನ ಕಾಲದ ಪುಸ್ತಕಗಳು ನಮಗೆ ಬೇಡವಾಗಿ, ವಿದ್ಯುನ್ಮಾನ ಮಾಧ್ಯಮದಿಂದ ಕಣ್ಣಿನ ತೊಂದರೆಗಳನ್ನು ಹೆಚ್ಚು ಅನುಭವಿಸುವಂತಾಗಿದೆ. ಹಳೆಯ ಆಯ್ಕೆಯ ಜತೆಗೆ ಹಿಂದಿನ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿತ್ತು. ನಂಬಿಕೆ ಮತ್ತು ತಿಳಿವಳಿಕೆಯ ನಡುವೆ ಭಾನಾತ್ಮಕ ಬುದ್ಧಿಜೀವಿಗಳಾಗಿ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಜೀವನ ಸುಖವಾಗಿರುತ್ತದೆ’ ಎಂದರು.

ADVERTISEMENT

‘ಶಿಕ್ಷಕರಿಗಿಂತಲೂ ಗುರುವಿಗೆ ಮಹತ್ವ ಹೆಚ್ಚಿರುವ ನಮ್ಮ ದೇಶದಲ್ಲಿ ಹಿರಿಯರು ಕಿರಿಯರಿಗೆ ಕರ್ತವ್ಯಗಳನ್ನು ತಿಳಿಸಿಕೊಡುವ ಪ್ರಯತ್ನವಾಗುತ್ತಿಲ್ಲ. ಆದ್ದರಿಂದ ನಮ್ಮ ಸಂಪ್ರದಾಯಗಳು ಯುವಜನರಿಂದ ದೂರವಾಗುತ್ತಿವೆ. ಈ ಹೊಣೆಗಾರಿಕೆಯನ್ನು ಹಿರಿಯರು ನಿರ್ವಹಿಸಬೇಕು’ ಎಂದರು.

ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಅಲ್ಫೋನ್ಸ್‌ ಡಿಸೋಜ ಅವರಿಗೆ ಸುವರ್ಣ ನಿಧಿ ಸನ್ಮಾನ, ಯಕ್ಷಗಾನ ಪ್ರಸಾದನ ಕಲಾವಿದ ಬಾಲಕೃಷ್ಣ ನಾಯಕ್‌ ಹಂದಾಡಿ ಅವರಿಗೆ ಹಾರಾಡಿ ರಾಮ ಗಾಣಿಗ, ಮಟಪಾಡಿ ವೀರಭದ್ರ ನಾಯಕ್‌ ಹಂದಾಡಿ ಸುಬ್ಬಣ್ಣ ಭಟ್‌, ಹಾಸ್ಯಗಾರ ಚಂದು ನಾಯಕ್‌ ಸ್ಮಾರಕ ದತ್ತಿನಿಧಿಯಿಂದ ಸನ್ಮಾನಿಸಲಾಯಿತು.

ಪ್ರಭಾಮಣಿ ರಾಜಶೇಖರ ಮೂರ್ತಿ ಇದ್ದರು. ಸಂಘದ ಅಧ್ಯಕ್ಷ ಎಚ್‌. ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್‌ ಉಡುಪ ವಂದಿಸಿದರು. ದಿನಕರ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್‌ ಪೂಜಾರಿ, ಅಲ್ತಾರು ನಾಗರಾಜ್‌, ದಿನೇಶ್‌ ಮತ್ತು ಬಿ.ಮಾಧವ ಖಾರ್ವಿ ಸಹಕರಿಸಿದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀರಾಮ ಕಾರುಣ್ಯ’ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.