ಉಡುಪಿ: ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಹೋರಾಡಿ ದಲಿತರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರೇ ನಿಜವಾದ ದಲಿತರ ಚೌಕಿದಾರ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.
ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಸೇನೆ ವತಿಯಿಂದ ಏರ್ಪಡಿಸಿದ್ದ ಏರ್ಪಡಿಸಿದ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೨೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಸಂವಿಧಾನ ಉಳಿದರೆ ಮಾತ್ರ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ, ಸಮಾನತೆ ಉಳಿಯಲು ಸಾಧ್ಯ. ಸಂವಿಧಾನ ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ ಎಂದರು.
ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ ಮಾತನಾಡಿ, ರಾಜಕೀಯ ಪಕ್ಷಗಳು ದಲಿತ ಸಮುದಾಯವನ್ನು ಕೇವಲ ವೋಟ್ಬ್ಯಾಂಕ್ಗಾಗಿ ಓಲೈಕೆ ಮಾಡುತ್ತಿವೆ ಹೊರತು, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದರು.
ದಲಿತ ಮುಖಂಡ ಎಸ್. ನಾರಾಯಣ ಮಾತನಾಡಿ, ದಲಿತರು ಸ್ವಾವಲಂಬನೆ ಬದುಕು ಕಟ್ಟಿಕೊಂಡಲ್ಲಿ ಮಾತ್ರ ಏಳ್ಗೆ ಕಾಣಲು ಸಾಧ್ಯ. ಕೇವಲ ಸರ್ಕಾರಿ ಕೆಲಸಕ್ಕಾಗಿ ಕಾಯದೆ, ಸಣ್ಣಪುಟ್ಟ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಯುವಸೇನೆಯ ಮುಖಂಡ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಗಣೇಶ್ ನೆರ್ಗಿ, ಎಂಜಿನಿಯರ್ ರಮೇಶ್ ಪಾಲ್, ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಂಬೇಡ್ಕರ್ ಯುವಸೇನೆಯ ಮಂಜುನಾಥ ಕಪ್ಪೆಟ್ಟು, ಸುರೇಶ್ ಪಾಲನ್ ತೊಟ್ಟಂ, ಅನಿಲ್ ಅಂಬಲಪಾಡಿ, ದಿನೇಶ್ ಮೂಡಬೆಟ್ಟು, ಶಶಿಕಲಾ ತೊಟ್ಟಂ, ಸುಕೇಶ್ ನಿಟ್ಟೂರು, ಪ್ರಸಾದ್ ನೆರ್ಗಿ, ಸಂಧ್ಯಾಕೃಷ್ಣ, ವಕೀಲೆ ಕವಿತಾ, ಸಂತೋಷ ಕಪ್ಪೆಟ್ಟು, ಸುಶೀಲ ಕೊಡವೂರು, ಸಂಪತ್ ಗುಜ್ಜರಬೆಟ್ಟು, ಲಕ್ಷ್ಮಣ ನಾಯ್ಕ, ಸುನಂದ ಬೆಂಗಳೂರು ಉಪಸ್ಥಿತರಿದ್ದರು. ಸುಮಿತ್ ನೆರ್ಗಿ ಸ್ವಾಗತಿಸಿದರು. ಗೀತಾ ಬಲರಾಮನಗರ ವಂದಿಸಿದರು. ಭಗವಾನ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.