ಉಡುಪಿ: ಯಡಮೊಗೆಯಲ್ಲಿ ಕೊಲೆಯಾದ ಉದಯ ಗಾಣಿಗ ಅವರ ನಿವಾಸಕ್ಕೆ ಶನಿವಾರ ಭೇಟಿನೀಡಿದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾ ಸತ್ಯ ಶೋಧನಾ ನಿಯೋಗವು ಕುಟುಂಬ ಸದಸ್ಯರಿಂದ ಮಾಹಿತಿ ಕಲೆ ಹಾಕಿತು.
ಎಪಿಸಿಆರ್ನ ಹುಸೇನ್ ಕೋಡಿಬೆಂಗ್ರೆ ಮಾತನಾಡಿ, ಕೊಲೆಯಾದ ಉದಯ ಗಾಣಿಗ ಅವರ ಪತ್ನಿ ಜ್ಯೋತಿ ಹಾಗೂ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸ್ಥಳೀಯರಿಂದಲೂ ಹಲವು ಸಂಗತಿಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿ ಸತ್ಯ ಶೋಧನ ತಂಡ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಲಿದೆ ಎಂದರು.
ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ರಾಜಕಾರಣಿಗಳಾದ ಪ್ರಾಣೇಶ್ ಯಾಡಿಯಾಳ ಸೇರಿದಂತೆ ಹಲವರು ಭಾಗಿಯಾಗಿದ್ದು, ತನಿಖೆಯ ದಿಕ್ಕು ತಪ್ಪದಂತೆ ನ್ಯಾಯಯುತವಾದ ತನಿಖೆಗೆ ಆಗ್ರಹಿಸಲಿದ್ದೇವೆ. ಪ್ರಕರಣದಲ್ಲಿ ಕೊಲೆಯಾದ ಉದಯ ಗಾಣಿಗ ಅವರು ಕುಟುಂಬದ ಆರ್ಥಿಕ ಆಧಾರ ಸ್ತಂಭವಾಗಿದ್ದು, ಅವರನ್ನು ಕಳೆದುಕೊಂಡ ಕುಟುಂಬಕ್ಕೆ ಆರ್ಥಿಕ ಹೊಡೆತ ಬಿದ್ದಿದೆ.
ತಕ್ಷಣ ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿಂದ ₹ 50 ಲಕ್ಷ ಪರಿಹಾರ ನೀಡಬೇಕು. ನ್ಯಾಯ ಸಿಗುವವರೆಗೂ ಕುಟುಂಬದ ಹೋರಾಟದಲ್ಲಿ ಎಪಿಸಿಆರ್ ನೆರವು ನೀಡಲಿದೆ ಎಂದರು.
ನಿಯೋಗದಲ್ಲಿ ಆನಂದ್ ಕಾರಂದೂರು, ಇದ್ರೀಸ್ ಹೂಡೆ, ಅಝೀಜ್ ಉದ್ಯಾವರ, ಪ್ರಸಾದ್ ಕಾಂಚನ್, ವಕೀಲ ಯಾಸೀನ್ ಕೋಡಿಬೆಂಗ್ರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.