ADVERTISEMENT

ಅಷ್ಟಮಿಗೆ ಹುಲಿ ಕುಣಿತದ ಸೊಬಗು

ಡೀಮನ್ ರಾಕ್ಷಸ ವೇಷದಲ್ಲಿ ರವಿ ಕಟಪಾಡಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 14:30 IST
Last Updated 19 ಆಗಸ್ಟ್ 2022, 14:30 IST
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಉಡುಪಿಯಲ್ಲಿ ಹುಲಿ ಕುಣಿತ ಪ್ರದರ್ಶನ ನಡೆಯಿತು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಉಡುಪಿಯಲ್ಲಿ ಹುಲಿ ಕುಣಿತ ಪ್ರದರ್ಶನ ನಡೆಯಿತು.   

ಉಡುಪಿ: ಕೃಷ್ಣ ಜನ್ಮಾಷ್ಟಮಿ ಹಾಗೂ ಪಿಟ್ಲಪಿಂಡಿ ಉತ್ಸವದ ದಿನ ಉಡುಪಿಯಲ್ಲಿ ಹುಲಿ ಕುಣಿತ ಕಣ್ತುಂಬಿಕೊಳ್ಳುವುದೇ ಸೊಗಸು. ಹುಲಿಯ ಬಣ್ಣ ಬಳಿದುಕೊಂಡು ಚೆಂಡೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುವ ಹುಲಿ ವೇಷಧಾರಿಗಳು ಅಷ್ಟಮಿಯ ಪ್ರಮುಖ ಆಕರ್ಷಣೆ.

ಕೋವಿಡ್ ಕಾರಣದಿಂದ ಎರಡು ವರ್ಷ ಕುಣಿತದಿಂದ ದೂರ ಸರಿದಿದ್ದ ಹುಲಿ ವೇಷಧಾರಿಗಳು ಈ ವರ್ಷ ಮನಸೋ ಇಚ್ಛೆ ಕುಣಿದು ಸಂಭ್ರಮಿಸಿದರು. ಉಡುಪಿಯ ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಪ್ರದರ್ಶನ ನೀಡಿಸಾರ್ವಜನಿಕರನ್ನು ರಂಜಿಸಿದರು. ಕಾಡಬೆಟ್ಟು ಅಶೋಕ್ ರಾಜ್ ತಂಡದ ಹುಲಿ ಕುಣಿತ ಎಲ್ಲರ ಗಮನ ಸೆಳೆಯಿತು. ಪೀಸ್ ಫೌಂಡೇಷನ್ ಮಣಿಪಾಲ ಸಂಸ್ಥೆಯ ಸದಸ್ಯರೂ ಹುಲಿ ವೇಷ ತೊಟ್ಟಿದ್ದು ಎಲ್ಲರನ್ನೂ ರಂಜಿಸುತ್ತಿದ್ದಾರೆ.

ಡೀಮನ್ ವೇಷದಲ್ಲಿ ರವಿ:

ADVERTISEMENT

ಪ್ರತಿ ವರ್ಷ ಅಷ್ಟಮಿಗೆ ವಿಭಿನ್ನ ವೇಷ ಧರಿಸಿ ಸಾರ್ವಜನಿಕರಿಂದ ಸಂಗ್ರಹವಾಗುವ ದೇಣಿಗೆಯನ್ನು ಬಡ ಮಕ್ಕಳ ಚಿಕಿತ್ಸೆಗೆ ವ್ಯಯಿಸುವ ಅಪರೂಪದ ವೇಷ ಕಲಾವಿದ ರವಿ ಕಟಪಾಡಿ ಈ ವರ್ಷ ಡೀಮನ್‌ ರಾಕ್ಷಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕಟಪಾಡಿ ಕೋಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ರವಿ ವೇಷಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಏಳು ವರ್ಷಗಳಿಂದ ಅಷ್ಟಮಿಗೆ ವೇಷ ಹಾಕುತ್ತಿದ್ದು ಪ್ರದರ್ಶನ ನೀಡುತ್ತಿದ್ದೇನೆ. ಇದುವರೆಗೆ ₹ 90 ಲಕ್ಷ ಸಂಗ್ರಹಿಸಿ 66 ಮಕ್ಕಳ ಚಿಕಿತ್ಸೆಗಾಗಿ ನೀಡಿದ್ದೇನೆ.

ಈ ವರ್ಷವೂ ಹಲವು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿಭಿನ್ನ ವೇಷ ಹಾಕಿದ್ದೇನೆ. ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರವಿ ಕಟಪಾಡಿ ತಂಡದ ಮಾರ್ಗದರ್ಶಕ ಮಹೇಶ್ ಶೆಣೈ ಮಾತನಾಡಿ, ಈ ಬಾರಿ 10 ಲಕ್ಷ ಸಂಗ್ರಹಿಸಿ 1 ಕೋಟಿ ಗುರಿ ಮುಟ್ಟುವ ಭರವಸೆ ತಂಡಕ್ಕೆ ಇದೆ ಎಂದರು.

ಸ್ಮಾಟ್ ಆರ್ಟ್ ಸಂಸ್ಥೆಯ ಮುಖ್ಯಸ್ಥ ಅಕ್ಷಯ್ ಮಾತನಾಡಿ ಮೂರು ತಿಂಗಳು ಶ್ರಮಪಟ್ಟು ವಿಭಿನ್ನ ವೇಷ ಸಿದ್ಧಪಡಿಸಿದ್ದು ಹಾನಿಕಾರಕವಲ್ಲದ ಬಣ್ಣ ಉಪಯೋಗಿಸುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.