ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರಾವಳಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಅದ್ಧೂರಿ ಜನಪದ ಉತ್ಸವ ನೆರವೇರಿತು.
ಶಾಸಕ ಗುರುರಾಜ ಗಂಟಿಹೊಳೆ ಅವರು ಕರಾವಳಿಯಲ್ಲಿ ಸುಗ್ಗಿ ಕೊಯ್ಲಿನ ಬಳಿಕ, ಆಚರಿಸುವ ಹೊಲಿ ಪೂಜೆ, ತಿರಿ ಪೂಜೆ ನೆರವೇರಿಸಿ, ತೆಂಗಿನ ಸಿರಿ ಅರಳಿಸುವ ಮೂಲಕ ಜಾನಪದ ಉತ್ಸವ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಸರ್ಕಾರಿ ಕಾಲೇಜಿನಲ್ಲಿ ಇಷ್ಟೊಂದು ಸಂಭ್ರಮದಿಂದ ಈ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಲೇಜಿನ ಇಷ್ಟು ವರ್ಷಗಳ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಕಾರ್ಯಕ್ರಮ. ಇಲ್ಲಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಕಾಲೇಜಿಗೆ ಹಬ್ಬದ ಕಳೆ ಬಂದಿದೆ’ ಎಂದರು.
ಕಾಲೇಜಿನ ಗೋಡೆಗೆ ಜಾನಪದ ಶೈಲಿಯ ವರ್ಲಿ ಚಿತ್ರ ಬಿಡಿಸಿದ ವಿದ್ಯಾರ್ಥಿ ಆದಿತ್ಯ ಮತ್ತು ತಂಡ, ಪ್ರಾಧ್ಯಾಪಕ ವೃಂದಕ್ಕೆ ಅಭಿನಂದಿಸಲಾಯಿತು.
ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಿಡಿಸಿ ಸದಸ್ಯ ರಾಜು ಪೂಜಾರಿ, ಕರ್ನಾಟಕ ಜಾನಪದ ಪರಿಷತ್ ಬೈಂದೂರು ವಲಯದ ಅಧ್ಯಕ್ಷ ಗಿರೀಶ್ ಬೈಂದೂರು, ಬೈಂದೂರಿನ ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಉದ್ಯಮಿ ಪ್ರಸಾದ್ ಪ್ರಭು ಶಿರೂರು, ಸುರಭಿ ನಿರ್ದೇಶಕ ಪಿ. ಸುಧಾಕರ ಇದ್ದರು.
ಹರ್ಷಿತಾ ಮತ್ತು ಸಂಗೀತಾ ಪ್ರಾರ್ಥಿಸಿದರು. ಸುಹರ್ಷಿಣಿ ಸ್ವಾಗತಿಸಿದರು. ಶಿವಕುಮಾರ ಪಿ.ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕ್ಷತಾ ಎಲ್ ಹಾಗೂ ನಾಗೇಂದ್ರ ನಿರೂಪಿಸಿದರು. ಆದಿತ್ಯ ಮತ್ತು ಮಂಜುನಾಥ ಡಿ. ವಂದಿಸಿದರು.
ಜಾನಪದ ಉತ್ಸವದ ವಿಶೇಷತೆ: ಅತಿಥಿಗಳನ್ನು ಚಂಡೆಮೇಳದೊಂದಿಗೆ ಪೂರ್ಣಕುಂಭ ಮೂಲಕ ಸ್ವಾಗತಿಸಲಾಯಿತು. ಅಡಿಕೆ ಮರ ಮತ್ತು ತೆಂಗಿನ ಮಡ್ಲುಗಳಿಂದ ವಿದ್ಯಾರ್ಥಿಗಳೇ ಮಾಡಿದ ಆಕರ್ಷಕ ಸ್ವಾಗತ ಗೋಪುರ, ಮುಳಿ ಹುಲ್ಲಿನ ಚಪ್ಪರ, ಕರವಾಳಿ ಶೈಲಿಯ ಸುಗ್ಗಿ ಕೊಯ್ಲಿನ ನಂತರದ ಹೊಲಿ ಪೂಜೆ, ತಿರಿ ಪೂಜೆ, ಹಡಿ ಮಂಚ ಪೂಜೆ, ಬೈಂದೂರಿನ ಜನಪದರ ಕೃಷಿ ಸಲಕರಣೆಗಳು, ಮೀನುಗಾರಿಕೆ ಹಾಗೂ ಮನೆಗಳಲ್ಲಿ ನಿತ್ಯ ಬಳಕೆಯಲ್ಲಿದ್ದ ಪುರಾತನ ವಸ್ತುಗಳ ಪ್ರದರ್ಶನ, ವರ್ಲಿ ಚಿತ್ರದಿಂದ ಅಲಂಕೃತಗೊಂಡ ಗೋಡೆ ಎಲ್ಲರ ಗಮನ ಸೆಳೆಯಿತು.
ಕಾಲೇಜು ಮಾವಿನ ತೋರಣ ಹಾಗೂ ಹೂವಿನಿಂದ ಮಧುಮಗಳಂತೆ ಸಿಂಗಾರಗೊಂಡಿತ್ತು. ಅಡಿಕೆ, ಬಾಳೆ, ತೆಂಗು, ಮಾವಿನ ಎಲೆ-ಗರಿಗಳು, ಎತ್ತಿನ ಗಾಡಿಯ ಚಕ್ರಗಳಿಂದ ರೂಪುಗೊಂಡ ಭವ್ಯವಾದ ಬಯಲು ವೇದಿಕೆ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಸಾಂಪ್ರದಾಯಿಕ ವೇಷಭೂಷಣ ವಿಶೇಷವಾಗಿತ್ತು.
ವಿದ್ಯಾರ್ಥಿಗಳಿಗೆ ಜಾನಪದ ಗೀತೆ, ಜಾನಪದ ನೃತ್ಯ ಸ್ಪರ್ಧೆ, ಯಕ್ಷಗಾನ, ನಡಿಗೆಯ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ಶೈಲಿಯ ಚೆನ್ನೆಮಣೆ, ಕುಂಟೆ ಬಿಲ್ಲೆ, ಚೌಕಬಾರಾ, ಲಗೋರಿ, ಬುಗುರಿ ಆಟಗಳನ್ನು ಏರ್ಪಡಿಸಲಾಗಿತ್ತು.
Quote - ಇಲ್ಲಿನ ಜನರ ಬದುಕಿನೊಂದಿಗೆ ಬೆಸೆದಿರುವ ಕಡಲ ಕಿನಾರೆ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವುದು ಈ ಉತ್ಸವದ ಸದುದ್ದೇಶ ನಾಗರಾಜ ಶೆಟ್ಟಿ ಪ್ರಾಂಶುಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.