ADVERTISEMENT

ಬಕ್ರೀದ್‌: ಉಡುಪಿಯಲ್ಲಿ ಒಂಟೆ, ಗೋವುಗಳ ಹತ್ಯೆ, ಅನಧಿಕೃತ ಸಾಗಾಣೆಗೆ ನಿರ್ಬಂಧ

ಶಾಂತಿಯುತ ಬಕ್ರೀದ್ ಆಚರಣೆಗೆ ಕ್ರಮ ಕೈಗೊಳ್ಳಿ: ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 14:24 IST
Last Updated 18 ಜುಲೈ 2021, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಬಕ್ರೀದ್ ಹಬ್ಬದ ಆಚರಣೆ ಸಂದರ್ಭ ಒಂಟೆ, ಗೋವುಗಳ ಹತ್ಯೆ ಮಾಡುವಂತಿಲ್ಲ. ಅನಧಿಕೃತವಾಗಿ ಪ್ರಾಣಿಗಳನ್ನು ಸಾಗಾಣೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಣಿಗಳ ಅನಧಿಕೃತ ಸಾಗಾಣೆ ಹಾಗೂ ವಧೆ ತಡೆ ಸಂಬಂಧ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ, ಗೋವುಗಳ ಅಧಿಕೃತ ಸಾಗಣೆಗೆ ಪಶು ಇಲಾಖೆಯಿಂದ ಅನುಮತಿ ಇರಬೇಕು. ಕೃಷಿಗೆ ಮತ್ತು ಪಶು ಸಂಗೋಪನೆಗೆ ಮಾತ್ರ ಗೋವುಗಳನ್ನು ಸಾಗಾಟ ಮಾಡಬಹುದು. ರೋಗಗ್ರಸ್ತ ಜಾನುವಾರುಗಳನ್ನು ಸಾಗಿಸುತ್ತಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ಹಾಜರು ಕಡ್ಡಾಯ ಎಂದರು.

ಅನಧಿಕೃತವಾಗಿ ಗೋವುಗಳನ್ನು ಸಾಗಿಸುವ ವಾಹನಗಳನ್ನು ಪತ್ತೆಮಾಡಿ ಗೋವುಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸಬೇಕು. ಜಾನುವಾರುಗೆ ಚಿಕಿತ್ಸೆ ಅಗತ್ಯವಿದ್ದರೆ ಪಶುವೈದ್ಯಾಧಿಕಾರಿಯಿಂದ ಚಿಕಿತ್ಸೆ ಕೊಡಿಸಬೇಕು. ಗೋವುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದರು.

ADVERTISEMENT

ಪ್ರಕರಣ ದಾಖಲಾದ ಬಳಿಕ ಗೋಶಾಲೆಗೆ ಹಸ್ತಾಂತರ ಮಾಡಿದ ಗೋವುಗಳನ್ನು ನ್ಯಾಯಾಲಯದಿಂದ ಆದೇಶವಾದ ಬಳಿಕ ಮಾಲೀಕರು ಪಡೆದುಕೊಳ್ಳಬಹುದು. ಈ ಸಂದರ್ಭ ಗೋಶಾಲೆಗಳಲ್ಲಿದ್ದಷ್ಟು ದಿನ ಗೋವುಗಳ ನಿರ್ವಹಣಾ ವೆಚ್ಚವನ್ನು ಭರಿಸಬೇಕು. ಅನಧಿಕೃತ ವಧಾಗಾರಗಳನ್ನು ಪತ್ತೆಹಚ್ಚಬೇಕು. ಗೋವಧೆ ಮಾಡುವವರನ್ನು ಠಾಣೆಗೆ ಕರೆಸಿ ತಿಳಿವಳಿಕೆ ನೀಡಿ ಮುಚ್ಚಳಿಕೆ ಪಡೆಯಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ಗಳು ಕಡ್ಡಾಯವಾಗಿ ಶಾಂತಿ ಸಭೆಗಳನ್ನು ನಡೆಸಬೇಕು. ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಬಕ್ರೀದ್‌ ಆಚರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅನಧಿಕೃತವಾಗಿ ಗೋವುಗಳ ಸಾಗಣೆ ಮಾಹಿತಿ ಸಿಕ್ಕರೆ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದರು.

ಪ್ರಾರ್ಥನಾ ಸ್ಥಳಗಳಲ್ಲಿ ಭದ್ರತೆ ವ್ಯವಸ್ಥೆ ಮಾಡಿ ಬ್ಯಾರಿಕೇಡ್ ಹಾಕಬೇಕು. ವಾಹನಗಳ ಸುಗಮ ಸಂಚಾರ ಹಾಗೂ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪೊಲೀಸರಿಗೆ ಎಡಿಸಿ ನಿರ್ದೇಶನ ನೀಡಿದರು.

ಪಾರ್ಥನಾ ಸ್ಥಳಗಳಲ್ಲಿ ಕೋವಿಡ್ -19 ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆಯಾಗಬೇಕು. ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ರಾತ್ರಿ ತಪಾಸಣಾ ಕೇಂದ್ರ ತರೆಯಬೇಕು. ವಿಭಾಗೀಯ ಮಟ್ಟದಲ್ಲಿ ಪಿಎಸ್‌ಐಗಳನ್ನೊಳಗೊಂಡ ವಿಶೇಷ ತಪಾಸಣಾ ತಂಡ ನೇಮಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಮುಖಂಡರೊಡನೆ ಸ್ನೇಹ ಸೌಹಾರ್ದ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.